ಕಲಬುರಗಿ: ಹೊರ ದೇಶಕ್ಕೆ ಹೋದವರನ್ನು ತರುವುದಕ್ಕೆ ಅದರದೇ ಆದ ಪ್ರಕ್ರಿಯೆ ಇದೆ. ಪ್ರಜ್ವಲ್ ಪ್ರಕರಣದಲ್ಲಿ ಕೇಂದ್ರ ಸರಕಾರ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತಿದೆ. ಆದರೆ ಕಾಂಗ್ರೆಸ್ ಇದನ್ನು ಬಿಜೆಪಿ ಮೇಲೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿಗೆ ನ್ಯಾಯಾಲಯದಲ್ಲಿ ಫೈಲ್ ಮಾಡಲಾಗಿದೆ. ರಾಜ್ಯ ಸರಕಾರಕ್ಕೆ ಸಹಕಾರ ನೀಡಲು ಕೇಂದ್ರ ತಯಾರಿದೆ. ಪತ್ರ ಬರೆದ ತತ್ಕ್ಷಣ ಪಾಸ್ಪೋರ್ಟ್ ರದ್ದು ಆಗಬೇಕು ಎಂದೇನಿಲ್ಲ.
ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಅಲ್ಲಿ ಚುನಾವಣೆ ಮುಗಿಯುವವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಅತ್ಯಂತ ಗಂಭೀರ ಪ್ರಕರಣ. ಪ್ರಜ್ವಲ್ ವಿಚಾರಣೆ ಎದುರಿಸಲೇಬೇಕು. ಅವರು ತಪ್ಪು ಮಾಡಿದ್ದರೆ ಕಠಿನ ಕ್ರಮ ಆಗಲೇಬೇಕು. ಇದರಲ್ಲಿ ಯಾವುದೇ ಅನುಕಂಪ ಇಲ್ಲ. ರಾಜ್ಯ ಸರಕಾರ ಇದರಲ್ಲಿ ತನಿಖೆಗಿಂತ ಹೆಚ್ಚು ರಾಜಕಾರಣ ಮಾಡಲು ಹೊರಟಿದೆ ಎಂದರು.
Ad