ಹಾಸನ: ರೈತನ ಮನೆಯ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ಮನೆಯ ಛಾವಣಿ ಶೀಟ್ ಧ್ವಂಸಗೊಳಿಸಿ ಹೆಂಚುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಯಡಕುಮರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವೆಂಕಟೇಶ್ ಅವರ ಮನೆ ಮೇಲೆ ಕಾಡಾನೆ ದಾಳಿ ಮಾಡಿದ್ದು, ಈ ಘಟನೆ ನಂತರ ಅವರ ಕುಟುಂಬ ಭಯಭೀತವಾಗಿದೆ. ೨೦ ದಿನಗಳಿಂದ ಅವರ ಮನೆ ಬಳಿಯೇ ಬೀಡುಬಿಟ್ಟಿರುವ ಪುಂಡಾನೆ ಇಂದು ಏಕಾಏಕಿ ಮನೆ ಮೇಲೆ ದಾಳಿ ಮಾಡಿದೆ.
ಅರಣ್ಯ ಇಲಾಖೆ ಅಧಿಕಾರಿ ಗಳು ತಕ್ಷಣವೇ ಆನೆಯನ್ನು ದೂರದ ಕಾಡಿಗೆ ಅಟ್ಟಬೇಕು. ಆನೆ ದಾಳಿಯಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರತಿದಿನ ಈ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಇದ್ದು ಯಾವ ಸಮಯದಲ್ಲಿ ದಾಳಿ ಆಗಲಿದೆ ಎಂಬ ಭಯದಲ್ಲಿಯೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಕಾಫಿ ತೋಟ ಸೇರಿದಂತೆ ಹೊಲಗದ್ದೆಗಳಿಗೆ ಕಾರ್ಮಿಕರು ಮತ್ತು ಗ್ರಾಮಸ್ಥರು ತೆರಳಲು ತೀವ್ರ ತೊಂದರೆ ಉಂಟಾಗಿದೆ.
ದಾರಿಯಲ್ಲಿಯೇ ಕಾಡಾನೆಗಳೆನಾದರೂ ದಾಳಿ ನಡೆಸಿದರೆ ಸಾವು ನೋವು ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಆನೆಗಳ ಉಪಟಳವನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.