ಹಾಸನ: ಅಧಿಕಾರ ಇರಲಿ, ಇಲ್ಲದಿರಲಿ, ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆಲುವು-ಸೋಲು ಸಹಜ. ನಮ್ಮ ತಂದೆ ದೇವೇಗೌಡರು ರಾಜಕೀಯವಾಗಿ ನೆಲೆ ಊರಲು ಈ ಜಿಲ್ಲೆಯೇ ಕಾರಣ ಎಂದು ಮಾಜಿ ಸಚಿವ ಹೆಚ್ಡಿ ರೇವಣ್ಣ ಹೇಳಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಹಾಸನದಲ್ಲಿ ಶಾಸಕರಾದ ಎ ಮಂಜು, ಸ್ವರೂಪ್ ಪ್ರಕಾಶ್ ಹಾಗೂ ಅಭ್ಯರ್ಥಿ ವಿವೇಕಾನಂದ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ನನಗೆ ದೇವರ ಆಶೀರ್ವಾದ ಇದೆ. ನಾನು ಜಿಲ್ಲೆಯ ಜನತೆಗೆ ಋಣಿಯಾಗಿ ಇದ್ದೇನೆ. ಹಾಸನ ಜಿಲ್ಲೆಯ ಜನರು ಯಾರೂ ಕೂಡ ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ನಿನ್ನೆ ಮೈಸೂರಿನಲ್ಲಿ ಸಭೆ ನಡೆಸಲಾಗಿದೆ. ಶಿಕ್ಷಣಕ್ಕೆ ಈ ರಾಜ್ಯದಲ್ಲಿ ಒತ್ತುಕೊಟ್ಟು ಹೊಸ ಪದವಿ , ಹೈಸ್ಕೂಲ್, ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಶಾಲಾ ಶಿಕ್ಣಕರು, ಪದವಿ ಉಪನ್ಯಾಸ ಕರ ನೇಮಕ ಮಾಡಿದ್ದೂ ಕೂಡ ಕುಮಾರಸ್ವಾಮಿ ಅವರ ಕಾಲದಲ್ಲಿ. ಜೊತೆಗೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಸೇರಿ ಶಿಕ್ಷಣಕ್ಕೆ ಕ್ರಾಂತಿಕಾರಕ ಬದಲಾವಣೆ ಮಾಡಿದ್ದರು.
ಈ ಹಿಂದೆ ಇದ್ದವರು ಗೆಲ್ಲಿಸಿದ ಬಳಿಕ ತಿರುಗಿ ನೋಡ್ತಾ ಇರಲಿಲ್ಲ. ಈಗ ನಮ್ಮ ಅಭ್ಯರ್ಥಿ, ತಮ್ಮ ಸಂಬಳ ಸೇರಿದಂತೆ ಸಂಪೂರ್ಣ ಅನುದಾನ ಶಿಕ್ಷಕರಿಗೆ ಮೀಸಲಿಡೊದಾಗಿ ಹೇಳಿದ್ದಾರೆ. ಹೀಗೆ ಘೋಷಣೆ ಮಾಡಿದ ವ್ಯಕ್ತಿ ಹಿಂದೆ ಯಾರು ಇರಲಿಲ್ಲ ಎಂದು ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಈಗ ಕಾಂಗ್ರೆಸ್ನಿಂದ ನಿಂತಿರುವ ವ್ಯಕ್ತಿ ಇಲ್ಲೇ ಇದ್ದು, ಸಕಲ ಸವಲತ್ತು ಅನುಭವಿಸಿದರು. ಈ ಜಿಲ್ಲೆಗೆ ಅವರ ಕೊಡುಗೆ ಏನು? ಈ ಸರ್ಕಾರ ಬಂದ ಬಳಿಕ ಶಿಕ್ಷಣ ಕ್ಷೇತ್ರ ಕುಸಿಯುತ್ತಿದೆ. ನಮ್ಮ ಪಕ್ಷದ ಅಭ್ಯರ್ಥಿ ವಿವೇಕಾನಂದಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಸರ್ಕಾರ ಬಂದು ಒಂದು ವರ್ಷ ಆಗಿದೆ. ವರ್ಷದಲ್ಲಿ ಸರ್ಕಾರದ ಕೊಡುಗೆ ಏನಿದೆ? ಶಿಕ್ಷಣ ಇಲಾಖೆಯಲ್ಲಿ ಗೊಂದಲ ಎಬ್ಬಿಸಲಾಗಿದೆ. ಸಚಿವರೇ ದಮ್ಕಿ ಹಾಕ್ತಾರೆ ಎನ್ನುವ ಮಾತಿದೆ. ಯಾರೂ ಕೂಡ ಹೆದರಬೇಕಾಗಿಲ್ಲ. ನಿನ್ನೆ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದರು.