ಕೊಟ್ಟಿಗೆಹಾರ: ಬಣಕಲ್, ಚಕ್ಕಮಕ್ಕಿ, ಹೊರಟ್ಟಿ, ಕೊಟ್ಟಿಗೆಹಾರ, ಗಬ್ ಗಲ್ ಮತ್ತಿತರ ಕಡೆ ಮುಸ್ಲಿಂ ಬಾಂದವರು, ಮಕ್ಕಳು ಹೊಸ ಬಟ್ಟೆ ತೊಟ್ಟು ಮಸೀದಿಗೆ ಹೋಗಿ ಕುರಾನ್ ಪಠಿಸಿ ನಮಾಜ್ ಮಾಡಿದರು. ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ಬಳಿಕ ಖಬರಸ್ಥಾನಕ್ಕೆ ತೆರಳಿ ಕುಟುಂಬದಲ್ಲಿ ಮೃತರಾದ ಹಿರಿಯರಿಗೆ ಕುಟುಂಬದ ಸದಸ್ಯರ ಮುಕ್ತಿಗಾಗಿ ಪ್ರಾರ್ಥಿಸಿದರು. ಕೊಟ್ಟಿಗೆಹಾರ ಜುಮ್ಮಾ ಮಸೀದಿಯ ಧರ್ಮಗುರು ಇಮ್ಧಾಧಿ ಕನ್ಯಾಣ ಪ್ರವಚನ ನೀಡಿ ಮಾತನಾಡಿ ಮುಸ್ಲಿಂ ಬಾಂದವರು ಆಚರಿಸುವ ಹಬ್ಬಗಳಲ್ಲಿ ಬಕ್ರೀದ್ ಹಬ್ಬವು ದೊಡ್ಡ ಹಬ್ಬವಾಗಿದ್ದು, ಈ ಹಬ್ಬವು ತ್ಯಾಗ, ಬಲಿದಾನದ ಪ್ರತೀಕವಾಗಿದೆ.ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಘಟನೆಯ ಸ್ಮರಣೆಯೇ ಬಕ್ರೀದ್ ಹಬ್ಬದ ಆಚರಣೆ.
ಪ್ರವಾದಿ ಇಬ್ರಾಹಿಂ ಅವರು ಇಸ್ಲಾಮಿನ ಏಕದೇವ ವಿಶ್ವಾಸ ಸ್ಥಾಪನೆಗಾಗಿ ತನ್ನ ಹೆತ್ತವರು,ಸ್ವಂತ ಕುಟುಂಬ ಮನೆ, ಆಸ್ತಿ ತ್ಯಾಗ ಮಾಡಿ ದೇಶಾಂತರ ಹೊರಟು ದೇವರ ಆದೇಶದಂತೆ ವೃದ್ದಾಪ್ಯದಲ್ಲಿ ಸ್ವಂತ ಮಗುವನ್ನು ಬಲಿ ಕೊಡಲು ಹೊರಟ ಅಮರ ಇತಿಹಾಸವನ್ನು ಬಕ್ರೀದ್ ಹಬ್ಬ ನೆನೆಸುತ್ತದೆ ಎಂದರು.
ಬಣಕಲ್ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಸಫ್ವಾನ್ ಫೈಝೀ ಮಾತನಾಡಿ ನಾವು ಸಮಾಜದಲ್ಲಿ ಬಡವ ಪರರಿಗೆ ದಾನ ಮಾಡುವ ಔದಾರ್ಯವನ್ನು ಹೊಂದಿ ನಮ್ಮ ಸಾಂಸಾರಿಕ ಜೀವನವನ್ನು ಸಫಲಗೊಳಿಸಬೇಕು.
ಉಳ್ಳವರು ಬಡವರಿಗೆ ದಾನ ನೀಡುವ ಮೂಲಕ ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದರು. ಈ ಸಂದರ್ಭದಲ್ಲಿ ಧರ್ಮಗುರು ಅಮಿರ್ ಅಲ್ ಫಾರೂಕಿ ಇದ್ದರು. ಚಕ್ಕಮಕ್ಕಿ ಮಸೀದಿಯಲ್ಲೂ ದರ್ಮಗುರು ಸಿನಾನ್ ಫೈಝೀ ಕುರಾನ್ ಪ್ರವಚನ ನೀಡಿದರು.