ಔರಾದ್: ತಾಲ್ಲೂಕಿನ ಪಾಶಾಪುರ ಗ್ರಾಮದಲ್ಲಿ 50 ಅಡಿ ಆಳದ ಬಾವಿಗೆ ಬಿದ್ದ ನರಿಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ವಿಷಯ ತಿಳಿದು ಶುಕ್ರವಾರ ಬೆಳಿಗ್ಗೆಯೇ ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಅಲಿಯೋದ್ದಿನ್, ಉಪ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ಅವರು ಅಗ್ನಿ ಶಾಮಕ ಸಿಬ್ಬಂದಿ ಸಹಾಯದಿಂದ ಬಾವಿಯಲ್ಲಿ ಬಿದ್ದಿದ್ದ ನರಿಯನ್ನು ಹೊರ ತೆಗೆದಿದ್ದಾರೆ.
ಪಶು ವೈದ್ಯಾಧಿಕಾರಿಯನ್ನು ಕರೆಸಿ ಚಿಕಿತ್ಸೆ ಕೊಡಿಸಿ ಸಂಜೆ ಹೊತ್ತಿಗೆ ಮತ್ತೆ ಅರಣ್ಯಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಶಾಪುರದಲ್ಲಿ ಕುಡಿಯುವ ನೀರಿಗಾಗಿ ಸರ್ಕಾರದಿಂದ ತೋಡಲಾದ ಬಾವಿಯಲ್ಲಿ ಈಚೆಗೆ ಸುರಿದ ಮಳೆಯಿಂದ ಹೆಚ್ಚಿನ ನೀರು ಬಂದಿದೆ. ಈ ನರಿ ಗುರುವಾರ ರಾತ್ರಿ ಆಕಸ್ಮಿಕವಾಗಿ ಬಿದ್ದಿದೆ. ಶುಕ್ರವಾರ ಬೆಳಿಗ್ಗೆ ರೈತರು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ.
Ad