ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಸಾವು ಬಯಸಿದ ಕಾಂಗ್ರೆಸ್ ಅಭ್ಯರ್ಥಿ ಎನ್.ರಾಜಣ್ಣ ಅವರನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕರೆ ನೀಡಿದರು.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೈಮರದಲ್ಲಿ ಕೈಗೊಂಡಿರುವ ಚುನಾವಣ ಪ್ರಚಾರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಉನ್ನತ ಸೇವೆ ಸಲ್ಲಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರಿಗೆ ಸಾವು ಬಯಸುವ ಮೂಲಕ ನಾಗರಿಕ ಸಮಾಜಕ್ಕೆ ಹಾಗೂ ಮಾಜಿ ಪ್ರಧಾನಿಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಧಕ್ಕೆ ತಂದಿದ್ದಾರೆ. ಈ ವ್ಯಕ್ತಿಗೆ ಮೇ.೧೦ ರಂದು ನಡೆಯಲಿರುವ ಚುನಾವಣೆಯಲ್ಲಿ ಸೋಲಿಸುವ ಮೂಲಕ ಅವರ ರಾಕ್ಷಸ ಮನಸ್ಸಿಗೆ ಬುದ್ಧಿ ಕಲಿಸಬೇಕಿದೆ ಎಂದರು.
೨೦೦೮ ರ ಉಪ ಚುನಾವಣೆಯಲ್ಲಿ ಮಧುಗಿರಿಯಿಂದ ನನ್ನ ಪತ್ನಿ ಅನಿತಾಳನ್ನು ನಿಲ್ಲಿಸಿದ್ದೆ. ಅದಕ್ಕೂ ಮುಂಚೆ ಅನಿತಾಳ ಬಳಿ ಅನುಮತಿ ಕೇಳಿದೆ. ಆಗ ನನ್ನ ಮಗ ನಿಖೀಲ್ ಒಂದು ಮಾತು ಹೇಳಿದ್ದ, ನಮ್ಮಪ್ಪ ತೀಟೆ ತೀರಿಸಿಕೊಳ್ಳಲು ನಿನ್ನ ನಿಲ್ಲಿಸ್ತಿದ್ದಾನೆ. ನೀನು ಸ್ಪರ್ಧೆ ಮಾಡಬೇಡ ಅಂತ ಹೇಳಿದ್ದನು. ಆದರೆ ಅನಿತಾ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದಳು. ಮಧುಗಿರಿ ಕ್ಷೇತ್ರದಲ್ಲಿ ಆ ವೇಳೆ ದೊಡ್ಡ ಹೋರಾಟ ಇತ್ತು,ಒಂದು ಕಡೆ ನಮ್ಮ ಕುಟುಂಬದ ಶಂಕ್ರಣ್ಣ ನಿಂತಿದ್ರು. ಇನ್ನು ಈ ರಾಕ್ಷಸ ಕೆ.ಎನ್ ರಾಜಣ್ಣನ ಮಧ್ಯೆ ಉಪಚುನಾವಣೆ ಮಾಡಿದ್ದೇವೆ. ಆ ಉಪ ಚುನಾವಣೆಯಲ್ಲಿ ಅನಿತಾ ಗೆಲುವು ಸಾಧಿಸಿ ಶಕ್ತಿ ತೋರಿಸಿದರು. ದೇವರ ಇಚ್ಛೆ ಅನಿತಾನೂ ರಾಜಕೀಯಕ್ಕೆ ಬಂದರು ಎಂದು ನುಡಿದರು.
ಹಾಸನದ ರಾಜಕೀಯಕ್ಕೆ ತೆರೆ ಎಳೆಯುವೆ: ಹಾಸನದಲ್ಲಿನ ರಾಜಕೀಯದಲ್ಲಿ ಬಹಳ ಕುತುಹಲ ನಡಿತಿದೆ. ಪಕ್ಷದ ಬೆಳವಣಿಗೆಯ ದೃಷ್ಠಿಯಿಂದ ಸದಸ್ಯದಲ್ಲೇ ಕುಟುಂಬದಲ್ಲಿ ಹಿರಿಯರ ಜೊತೆ ಮಾತನಾಡಿ,ತೀರ್ಮಾನ ತೆಗೆದುಅದಕ್ಕೆ ಅಂತಿಮ ತೆರೆ ಎಳೆಯುತ್ತೇನೆ.ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ಗೆ ಸಹಮತ ಇರುತ್ತದೆ ಎಂದರು ಹೇಳಿದರು.
ಕುತಂತ್ರದಿಂದ ದೇವೇಗೌಡರಿಗೆ ಸೋಲು: ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಕುತಂತ್ರದಿಂದ ಸೋಲಿಸಲಾಗಿದೆ. ಆ ನೋವಿನಿಂದ ಮಾನಸಿಕವಾಗಿ ಕುಗ್ಗಿ ಇವತ್ತು ಆರೋಗ್ಯ ತಪ್ಪಿದ್ದಾರೆ. ದೇವೇಗೌಡರು ಇನ್ನೂ ನಮ್ಮ ಜೊತೆ ಜೀವಂತವಾಗಿ ಇರಬೇಕಾದರೆ ತುಮಕೂರು ಜಿಲ್ಲೆಯಲ್ಲಿನ ೧೧ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕಿದೆ ಎಂದು ಭಾವನಾತ್ಮಕ ನುಡಿಗಳನ್ನಾಡಿದರು.