ತುಮಕೂರು: ಚುನಾವಣೆ ಸಮೀಪಿಸುತ್ತಿರುವಂತೆ ಅಕ್ರಮ ಹಣದ ವಹಿವಾಟನ್ನು ನಿಯಂತ್ರಿಸಲು ಚೆಕ್ಪೋಸ್ಟ್ ತೆರೆದು ಚುನಾವಣಾ ಆಯೋಗ ಕ್ರಮ ತೆಗೆದುಕೊಂಡಿರುವುದು ಒಂದೆಡೆಯಾದರೆ, ಪರಿಚಿತರಲ್ಲದವರ ಖಾತೆಗೆ ಲಕ್ಷಗಟ್ಟಲೇ ಜಮೆಯಾಗುತ್ತಿರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಐದು ದಿನಗಳ ಹಿಂದಷ್ಟೇ ತುಮಕೂರಿನ ಪತ್ರಕರ್ತ ರಂಗನಾಥ್ ಅವರ ಕೆನರ್ ಬ್ಯಾಂಕ್ ಉಳಿತಾಯ ಖಾತೆಗೆ ದಿಢೀರನೇ 2.50 ಲಕ್ಷ ಹಣ ಜಮೆಯಾಗಿತ್ತು.ಕೂಡಲೇ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದು ವಾಪಸ್ ಮಾಡಿದರು. ಈ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಿಗೆ ಇತರೆ ಖಾತೆದಾರರ ಖಾತೆಗಳಿಗೂ ದಿಢೀರನೇ ಲಕ್ಷಗಟ್ಟಲೇ ಹಣ ಜಮೆಯಾಗುತ್ತಿರುವ ಸಂಗತಿಗಳು ಬಹಿರಂಗಗೊಳ್ಳುತ್ತಿವೆ.
ತುಮಕೂರಿನ ಸಿಂಡಿಕೇಟ್ ಬ್ಯಾಂಕ್ ಮಾಜಿ ಉದ್ಯೋಗಿ ರಂಗಕರ್ಮಿ ಚಿಕ್ಕಹನುಮಂತಯ್ಯ ಅವರ ಪತ್ನಿ ನಿವೃತ್ತ ಶಾಲಾ ಮುಖ್ಯ ಶಿಕ್ಷಕಿ ಜಯಮ್ಮ ಅವರು ತುಮಕೂರಿನ ಎಸ್ಬಿಐ ಬಟವಾಡಿ ಶಾಖೆಯಲ್ಲಿ ಪಿಂಚಣಿ ಖಾತೆ ಹೊಂದಿದ್ದು, ಅವರ ಖಾತೆಗೆ ಮಾ.28ರಂದು ದಿಢೀರನೇ 4.73 ಲಕ್ಷ ರೂಪಾಯಿ ಜಮೆ ಆಗಿದೆ. ಮಾ.28ರಂದು ಇದನ್ನು ಗಮನಿಸಿದ ಜಯಮ್ಮ ಅವರು ಪತಿಯೊಂದಿಗೆ ಬ್ಯಾಂಕ್ ಶಾಖೆಗೆ ಬಂದು ವ್ಯವಸ್ಥಾಪಕರಿಗೆ ವಿಷಯ ಮುಟ್ಟಿಸಿದ್ದಾರೆ.
ಬ್ಯಾಂಕ್ನವರಿಗೂ ಸಹ ಈ ಹಣ ಹೇಗೆ ಜಮೆಯಾಯಿತು ಎಂಬುದು ತಿಳಿಯದೆ ಆರ್ಬಿಐ ಗಮನಕ್ಕೆ ತಂದೇ ಇದನ್ನು ವಾಪಸ್ ಪಡೆಯಬೇಕು ಎಂದು ಖಾತೆದಾರರಿಗೆ ಹೇಳಿ ಗಂಟೆಗಟ್ಟಲೇ ಕೂರಿಸಿಕೊಂಡು, ಮೇಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಕೊನೆಗೆ ಖಾತೆದಾರರು ಅನಾಮತ್ತಾಗಿ ನಮ್ಮ ಖಾತೆಗೆ ಬಂದ ಹಣವನ್ನು ನೀವು ಹಿಂಪಡೆಯಲೇಬೇಕು ಎಂದು ಪ್ರಾಮಾಣಿಕತೆ ಪ್ರದರ್ಶಿಸಿ ಮಾಡಿದ ಒತ್ತಾಯಕ್ಕೆ ಮಣಿದು ಬ್ಯಾಂಕ್ನವರು ಖಾತೆದಾರರು ಅರ್ಜಿ ಬರೆಸಿಕೊಂಡು ಹಣವನ್ನು ಖಾತೆಯನ್ನು ಹಿಂತೆಗೆದಿದ್ದಾರೆ. ಆದರೆ ಹಣ ಯಾವ ಖಾತೆಯಿಂದ ಬಂದಿದೆ. ಯಾರು ಇದನ್ನು ಹಾಕಿದವರು ಎಂಬ ಮಾಹಿತಿ ಬಹಿರಂಗಗೊಂಡಿಲ್ಲ.
ಸದ್ಯ ಜಿಲ್ಲೆಯಲ್ಲಿ ಅನಾಮತ್ತಾಗಿ ಖಾತೆಗೆ ಜಮೆಯಾದ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನೆಷ್ಟು ಈ ರೀತಿ ಖಾತೆಗೆ ಹಣ ವರ್ಗಾವಣೆ ಪ್ರಕರಣಗಳು ಜರುಗಿತ್ತಿವೆಯೋ ಗೊತ್ತಿಲ್ಲ. ಚೆಕ್ಪೋಸ್ಟ್ನಲ್ಲಿ ಅಕ್ರಮ ಹಣ ವರ್ಗಾವಣೆ ಮೇಲೆ ನಿಗಾ ಇಟ್ಟಿರುವ ಜಿಲ್ಲಾಡಳಿತ, ಚುನಾವಣಾ ಆಯೋಗ, ಈ ರೀತಿಯ ಹಣ ವರ್ಗಾವಣೆ ಮೇಲೆ ಯಾವ ರೀತಿ ನಿಯಂತ್ರಿಸುತ್ತಿದೆಯೋ ಕಾದು ನೋಡಬೇಕಿದೆ.