ತುಮಕೂರು: ತುಮಕೂರು ಬಿಜೆಪಿ ನಗರ ಮಂಡಲದ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 80ನೇ ವರ್ಷದ ಹುಟ್ಟು ಹಬ್ಬ ಹಾಗೂ ಬಿಜೆಪಿ ಪಕ್ಷದ ವಿಜಯ ರಥ ಯಾತ್ರೆಯ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ನಗರದ ಆರ್.ಟಿ.ಓ ಕಚೇರಿ ಅವರಣದಲ್ಲಿರುವ ಅಭಯ ಆಂಜನೇಯ ಸ್ವಾಮೀಜಿ ದೇವಾಲಯ ಬಳಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ರಾಜ್ಯದಲ್ಲಿ 4-5 ದಶಕಗಳ ಕಾಲ ಬಿಜೆಪಿಗೆ ಶಕ್ತಿಯಾಗಿ ಕೆಲಸ ಮಾಡಿದವರು ಬಿ.ಎಸ್.ಯಡಿಯೂರಪ್ಪ, ರೈತ ಹೋರಾಟಗಾರರಾಗಿ ತಮ್ಮ ಹೋರಾಟ ಆರಂಭಿಸಿ, ಹಂತ ಹಂತವಾಗಿ ಬೆಳೆದು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ದಿಯತ್ತ ಮುನ್ನೆಡೆಸಿದ್ದಾರೆ. ಸೈಕಲ್ ಹತ್ತಿ ಹೋರಾಟ ನಡೆಸಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ತೆರೆಯಲು ಕಾರಣರಾಗಿದ್ದಾರೆ. ಬಿಜೆಪಿಯ ಲ್ಲಿರುವ ನನ್ನಂತಹ ಅನೇಕ ಜನರ ರಾಜಕೀಯ ಜೀವನಕ್ಕೆ ಯಡಿಯೂರಪ್ಪ ಕಾರಣ.ಹಾಗಾಗಿ ಇಂದು ಅಭಿಮಾನ ದಿಂದ ಅವರ ಹುಟ್ಟು ಹಬ್ವವನ್ನು ಆಚರಿಸುತ್ತಿದ್ದೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿಹೆಬ್ಬಾಕ ಮಾತನಾಡಿ, ಇಂದು ಜಿಲ್ಲೆಯಾದ್ಯಂತ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ 80ನೇ ಹುಟ್ಟು ಹಬ್ಬವನ್ನು ಬಹಳ ಸಂಭ್ರಮದಿಂದ ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟು ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಯಡಿಯೂರಪ್ಪ ಅವರ ರಾಜಕೀಯ ಕರ್ಮ ಭೂಮಿ ಶಿವಮೊಗ್ಗದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ಉದ್ಘಾಟಿಸುವ ಮೂಲಕ ಆಚರಿಸುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ. ಬಿ.ಎಸ್.ವೈ ಅವರ ಮಾರ್ಗದರ್ಶನ ಇನ್ನೂ ಹತ್ತಾರು ವರ್ಷಗಳ ಕಾಲ ಪಕ್ಷಕ್ಕೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರ ಕೆಲಸ ಶ್ಲಾಘನೀಯ. ರೈತನಾಯಕನಾಗಿ ಪಕ್ಷದಲ್ಲಿ ಗುರುತಿಸಿಕೊಂಡು ತಮ್ಮ ವರ್ಚ್ಚಿಸಿನಿಂದಲೇ ಒಂದೊಂದೇ ಮೆಟ್ಟಿಲು ಹತ್ತಿ, ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದವರು. ಇಂತಹ ವ್ಯಕ್ತಿಯ ಜನ್ಮ ದಿನವನ್ನು ನಾವೆಲ್ಲರೂ ಬಹಳ ಖುಷಿಯಿಂದಲೇ ಆಚರಿಸುತ್ತಿದ್ದೇವೆ. ಅವರು ಇನ್ನೂ ಹತ್ತಾರು ವರ್ಷ ಆರೋಗ್ಯದಿಂದ ಬದುಕುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಎಂ.ಎಲ್.ಸಿ. ಡಾ.ಹುಲಿನಾಯ್ಕರ್, ಶಿವಪ್ರಸಾದ್, ಕೊಪ್ಪಲ್ ನಾಗರಾಜು, ನಗರ ಮಂಡಲ ಅಧ್ಯಕ್ಷ ಹನುಮಂತರಾಜು, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಸಿ.ಎನ್.ರಮೇಶ್, ವಿಷ್ಣುವರ್ಧನ್, ಮಂಜುನಾಥ್, ಕೆ.ಪಿ.ಮೆಹೇಶ್, ವೇದಮೂರ್ತಿ, ರಾಜೀವ್, ಗಣೇಶ್, ವಿರುಪಾಕ್ಷಪ್ಪ, ಆಟೋ ಯಡಿಯೂರಪ್ಪ, ಕುಮಾರ್, ಸರೋಜಗೌಡ, ರಾಧಮ್ಮ, ಸೌಮ್ಯ, ಲತಾ, ಕಮಲಮ್ಮ, ಜ್ಯೋತಿ, ಹನುಮಂತರಾಯಪ್ಪ, ಬಂಬು ಮೋಹನ್, ನಾಗೇಂದ್ರ ಚನ್ನಬಸಪ್ಪ, ಯಶಸ್, ಟಿ.ಡಿ.ವಿನಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀ ಅಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ, ರಾಜ್ಯ ಸರಕಾರದ ಅಭಿವೃದ್ದಿ ಕಾರ್ಯಗಳನ್ನು ಬಿಂಬಿಸುವ ವಿಜಯ ರಥಯಾತ್ರೆಗೆ ಚಾಲನೆ ನೀಡಲಾಯಿತು. ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.