ತುಮಕೂರು: ಭಾರತದ ಸ್ವಾತಂತ್ರೋತ್ತರ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯ ದಿನಗಳು ಅತ್ಯಂತ ಕರಾಳ ಮತ್ತು ಕಪ್ಪುಚುಕ್ಕೆಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಸುರೇಶಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ತುರ್ತುಪರಿಸ್ಥಿತಿಯ ಕರಾಳ ದಿನಗಳು ಎಂಬ ವಿಚಾರ ಕುರಿತ ಪ್ರಬುದ್ದರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,1975ರ ಜೂನ್ 25ರಿಂದ ಮಾರ್ಚ್ 1977ರವರೆಗಿನ ತುರ್ತುಪರಿಸ್ಥಿತಿಯ ದಿನಗಳ ದೇಶದ ಜನರಿಗೆ ಅತ್ಯಂತ ಕಷ್ಟದ ದಿನಗಳಾಗಿದ್ದವು ಎಂದರು.
ದೇಶಕ್ಕೆ ೧೯೮೩ರ ಜೂನ್ ೨೫, ಕಪಿಲ್ದೇವ್ ನೇತೃತ್ವದಲ್ಲಿ ಭಾರತ ವಲ್ಡ್ಕಪ್ ಗೆದ್ದ ಸಂಭ್ರಮದ ದಿನವಾದರೆ, ಜೂನ್ ೨೫ರ ೧೯೭೫ರ ದಿನ ದೇಶದ ಮೇಲೆ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ನೋವಿನ ದಿನ.೧೯೭೩ರಲ್ಲಿ ಗುಜರಾತ್ನ ಹಾಸ್ಟಲ್ವೊಂದರಲ್ಲಿ ಊಟ ಸರಿಯಿಲ್ಲ ಎಂದು ಹುಟ್ಟಿಕೊಂಡ ಚಳುವಳಿ ಮುಖ್ಯಮಂತ್ರಿ ಚಿಮ್ಮನ್ ಬಾಯಿ ಪಟೇಲ್ ಅವರ ರಾಜೀನಾಮೆಯಿಂದ ಸ್ಪೂರ್ತಿ ಪಡೆದು, ಜೆಪಿ ನೇತೃತ್ವದಲ್ಲಿ ಇಡೀ ದೇಶಕ್ಕೆ ವ್ಯಾಪಿಸಿದ ಪರಿಣಾಮ, ನ್ಯಾಯಾಂಗ ಹೋರಾಟದಲ್ಲಿ ಹಿನ್ನೆಡೆ ಅನುಭವಿಸಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು. ಇದರ ಪರಿಣಾಮ ವ್ಯಕ್ತಿ ಸ್ವಾತಂತ್ರದ ಜೊತೆಗೆ, ವಾಕ್ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರವನ್ನು ಈ ದೇಶದ ಜನರು ಕಳೆದುಕೊಳ್ಳಬೇಕಾಯಿತು. ಲಕ್ಷಾಂತರ ಹೋರಾಟಗಾರರು ಮೀಸಾ ಕಾಯ್ದೆಯಡಿ ಜೈಲು ಸೇರಿ, ಚಿತ್ರಹಿಂಸೆ ಅನುಭವಿಸಿದರೂ ಎಂದು ಹಳೆಯದನ್ನು ಮೇಲುಕು ಹಾಕಿದರು.
ತುರ್ತುಪರಿಸ್ಥಿತಿಯ ಹೋರಾಟಕ್ಕೆ ತುಮಕೂರು ಜಿಲ್ಲೆಯ ಕೊಡುಗೆ ಆಪಾರ.ತುರ್ತುಪರಿಸ್ಥಿತಿ ವಿರೋಧಿಸಿದ ಎಸ್.ಮಲ್ಲಿಕಾಜುನಯ್ಯ, ಕಾ.ಬೋರಪ್ಪ, ಶ್ರೀನಿವಾಸರಾಜು,ಎಸ್, ಶಿವಣ್ಣ, ಡಾ.ಸುಬ್ಬಣ್ಣ, ಕೆ.ಶಿವಣ್ಣ, ಡಾ.ಚರಿಯನ್, ವೈ.ಸಿ.ನಂಜುಂಡಯ್ಯ ಸೇರಿದಂತೆ ಅನೇಕರು ನನ್ನ ಜೊತೆಯಲ್ಲಿ ಜೈಲು ವಾಸ ಅನುಭವಿಸಿದರು. ತುರ್ತುಪರಿಸ್ಥಿತಿ ವಿರೋಧಿಸಿದ ಎಲ್.ಕೆ.ಅಡ್ವಾಣಿ, ಮಧುದಂಡವಂತೆ, ರಾಮಕೃಷ್ಣ ಹಗಡೆ, ಜೆ.ಹೆಚ್.ಪಟೇಲ್, ಜಾರ್ಜ್ ಫರ್ನಾಡಿಂಸ್ ಸೇರಿದಂತೆ ರಾಷ್ಟ್ರಮಟ್ಟದ ನಾಯಕರು ಸುಮಾರು ೧೫ ತಿಂಗಳ ಕಾಲ ಜೈಲು ವಾಸದ ವೇಳೆ ನೀಡಿದ ಮಾರ್ಗದರ್ಶನ ನಮ್ಮನ್ನು ಜನಪ್ರತಿನಿಧಿಯಾಗವಂತೆ ಪ್ರೇರೆಪಿಸಿತ್ತು ಎಂದು ಎಸ್.ಸುರೇಶಕುಮಾರ್ ತಿಳಿಸಿದರು.
ತುರ್ತು ಪರಿಸ್ಥಿತಿಯ ಎರಡು ವರ್ಷಗಳ ಕಾಲ ಈ ದೇಶದ ಪತ್ರಿಕಾ ಸ್ವಾತಂತ್ರ, ವ್ಯಕ್ತಿ ಸ್ವಾತಂತ್ರ, ವಾಕ್ ಸ್ವಾತಂತ್ರವನ್ನು ಕಿತ್ತುಕೊಳ್ಳುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸೇತರರನ್ನು ಜೈಲಿಗೆ ಹಾಕಿ, ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಯಿತು. ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಯಿಂದ ನಲುಗಿದ್ದ ಜನತೆ, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯವಾಗಿ ಸೋಲುಂಟು ಮಾಡಿದರು. ಆ ಮೂಲಕ ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಕ್ಕೆ ಅವಕಾಶ ಇಲ್ಲ ಎಂಬ ಸಂದೇಶವನ್ನು ಜನತೆಗೆ ಪ್ರಪಂಚಕ್ಕೆ ನೀಡಿದರು ಎಂದರು.
ತುರ್ತುಪರಿಸ್ಥಿತಿಯ ವೇಳೆ ಕರ್ನಾಟಕದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ವಿರೋಧಪಕ್ಷದ ನಾಯಕರೆಲ್ಲರೂ ಒಂದಿಲೊಂದು ಕೇಸಿನಲ್ಲಿ ಜೈಲಿನಲ್ಲಿದ್ದರೂ ನಮ್ಮ ಕಾರ್ಯಕರ್ತರು ಹಗಲಿರುಳು ಹೋರಾಟ ನಡೆಸಿ ಜೈಲಿನಿಂದಲೇ ಸ್ಪರ್ಧಿಸಿದ್ದ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ಅಂದು ಕಾರ್ಯಕರ್ತರು ಅಂತರಂಗದಲ್ಲಿ ನಡೆಸಿದ ಪ್ರಚಾರ ನಮಗೆ ಇಂದು ಮಾದರಿಯಾಗಬೇಕು ಎಂದು ಸುರೇಶಕುಮಾರ್ ನುಡಿದರು.
ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ವಾಸ ಅನುಭವಿಸಿದ್ದ ವೈ.ಸಿ.ನಂಜುಂಡಯ್ಯ, ವೆಂಕಟಕೃಷ್ಣರಾವ್, ಆಶ್ವಥನಾರಾಯಣಶೆಟ್ಟಿ, ನಾಗರಾಜು ಶೆಟ್ಟಿ, ನಾಗರಾಜು,ವೈ. ಅಶ್ವಥಪ್ಪ, ಪಿ.ಯು.ಪಾಪಣ್ಣ, ಚಿನ್ನೋಬಳಯ್ಯ, ಲಕ್ಷ್ಮಪತಿ, ಕೆ.ಎಂ.ಕಪಣ್ಣ, ಚಂದ್ರಣ್ಣ ಅವರುಗಳನ್ನು ಸನ್ಮಾನಿಸಲಾಯಿತು.
ಡಾ.ಪರಮೇಶ್, ನಟರಾಜು ಹುಲಿಯೂರು ದುರ್ಗ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭರಪ್ಪಾಜಿ, ಶಕುಂತಲಾ ನಟರಾಜು,ವಿಶ್ವನಾಥ್ ಹೆಚ್.ಆರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.