ತುಮಕೂರು: ಕಾಂಗ್ರೆಸ್ ಮಾಜಿ ಶಾಸಕ ಶಫಿ ಅಹ್ಮದ್ ಬಗ್ಗೆ ಅಪಾರವಾದ ಗೌರವ ಇದೆ. ನನ್ನನ್ನು ವಿಶ್ವಾಸಘಾತುಕ ಎಂದಿದ್ದಾರೆ. ಅವರು ಹಿರಿಯರಾಗಿದ್ದು, ಏನೇ ಹೇಳಿದರೂ ಸ್ವೀಕರಿಸುತ್ತೇನೆ’ ಎಂದು ಶಾಸಕ ಡಾ.ಜಿ. ಪರಮೇಶ್ವರ ಹೇಳಿದರು.
ತಮ್ಮ ಅಳಿಯ ರಫಿಕ್ ಅಹ್ಮದ್ ಅವರಿಗೆ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ನಂತರ ಪರಮೇಶ್ವರ ವಿರುದ್ಧ ಶಫಿ ಅಹ್ಮದ್ ಟೀಕಾಪ್ರಹಾರ ನಡೆಸಿ, ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಶಫಿ ಅಹ್ಮದ್ ಆರೋಪಕ್ಕೆ ಪ್ರತಿಕ್ರಿಯಿಸಿದರು. ‘ಶಫಿ ಅಹ್ಮದ್ ಕುಟುಂಬಕ್ಕೆ ಟಿಕೆಟ್ ತಪ್ಪಲು ನಾನು ಕಾರಣನಲ್ಲ. ಟಿಕೆಟ್ ನೀಡುವುದು ನನ್ನೊಬ್ಬನ ನಿರ್ಧಾರವಲ್ಲ. ಪಕ್ಷದ ರಾಷ್ಟ್ರೀಯ ಚುನಾವಣಾ ಸಮಿತಿಯು ಯಾರಿಗೆ ಟಿಕೆಟ್ ಕೊಡಬೇಕು ಎಂಬುವುದನ್ನು ನಿರ್ಧರಿಸುತ್ತದೆ’ ಎಂದರು.
‘ನನ್ನ ಅಭಿಪ್ರಾಯವನ್ನು ಸಮಿತಿಯ ಮುಂದೆ ಹೇಳಿದ್ದೇನೆ. ಪರಿಶೀಲನೆ ಮಾಡಿ ಸಮಿತಿಯವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಇಕ್ಬಾಲ್ ಅಹ್ಮದ್ ಸಾಮಾನ್ಯ ಕಾರ್ಯಕರ್ತ. ಯಾವ ಮಾನದಂಡ ಇಟ್ಟುಕೊಂಡು ಅವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂಬುವುದು ಗೊತ್ತಿಲ್ಲ. ಶಫಿ ಅಹ್ಮದ್ 50 ವರ್ಷ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರು ಪಕ್ಷ ತೊರೆಯದಂತೆ ಮನವಿ ಮಾಡುತ್ತೇನೆ’ ಎಂದರು.