ತುಮಕೂರು: ವಿವಾಹ ನಂತರವೂ ಹೆಚ್ಚಿನ ವರದಕ್ಷಿಣೆಗೆ ಹಿಂಸಿಸಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ಸಾವಿಗೆ ಕಾರಣರಾದ ಎಲ್ಲ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಅವರನ್ನು ಬಂಧಿಸುವಂತೆ ವರದಕ್ಷಿಣೆ ವಿರೋಧಿ ವೇದಿಕೆ ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಅದರ ವಿವರ ಈ ಕೆಳಕಂಡಂತಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಶಿಡ್ಲಕಟ್ಟೆಯ ದೇವರಾಜು ಮತ್ತು ವಿಜಯಲಕ್ಷ್ಮಿ ಅವರ ಪುತ್ರಿ ಮೇಘನಾ ಅವರನ್ನು ದಿ: 24.06.2019 ರಂದು ತುಮಕೂರಿನ ಹನುಮಂತಪುರದ ಸಣ್ಣಮದ್ದಪ್ಪ ಅವರ ಪುತ್ರ ಮನೋಜ್ ಕುಮಾರ್ ಅವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ವಿವಾಹದ ಸಂದರ್ಭದಲ್ಲಿ ಸಾಕಷ್ಟು ವರದಕ್ಷಿಣೆ, ವರೋಪಚಾರ ನೀಡಿದ್ದರೂ ಮದುವೆಯ ನಂತರವೂ ಮತ್ತಷ್ಟು ವರದಕ್ಷಿಣೆ ತರುವಂತೆ ಗಂಡ ಹಾಗೂ ಕುಟುಂಬದವರಿಂದ ಒತ್ತಾಯಗಳು ಆರಂಭವಾದವು.
ಗಂಡನ ಮನೆಯವರ ಒತ್ತಾಯಕ್ಕೆ ಮಣಿದು ಮೇಘನಾ ತವರಿಗೆ ಹೋಗಿ ಸಾಕಷ್ಟು ಹಣವನ್ನೂ ತಂದುಕೊಟ್ಟಿದ್ದರು. ಇಷ್ಟಾದರೂ ಸಾಕಾಗದ ರೀತಿಯಲ್ಲಿ ಗಂಡ ಹಾಗೂ ಅತ್ತೆ ಲಕ್ಷ್ಮೀದೇವಿ ಇತರರು ಮತ್ತೆ ಮತ್ತೆ ಮಾನಸಿಕ ಕಿರುಕುಳ ನೀಡುತ್ತಿದ್ದ ಬಗ್ಗೆ, ಮಕ್ಕಳಾಗಲಿಲ್ಲವೆಂದು ಜರಿಯುತ್ತಿದ್ದ ಬಗ್ಗೆ ಮೇಘನಾ ಅವರ ತಾಯಿ ದೂರಿದ್ದಾರೆ. ಪೋಷಕರು ಮಗಳ ಮನೆಗೆ ಹಿರಿಯರೊಂದಿಗೆ ಆಗಮಿಸಿ ರಾಜಿ ಪಂಚಾಯತಿ ಮಾಡಿ ಹೋಗಿದ್ದರೂ ಕಾಟ ಮಾತ್ರ ನಿಂತಿರಲಿಲ್ಲ.
೨೦೨೩ರ ಮಾರ್ಚ್ ೨೦ ರಂದು ಸಂಜೆ ಗಂಡ ಮನೋಜ್ ಕುಮಾರ್ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿರುತ್ತಾನೆ. ಪೋಷಕರು ಇಲ್ಲಿಗೆ ಆಗಮಿಸಿ ನೋಡಲಾಗಿ ಘಟನಾ ಸ್ಥಳದಲ್ಲಿ ಸಾಕಷ್ಟು ಅನುಮಾನಗಳು ಕಂಡುಬಂದಿರುತ್ತವೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಐಪಿಸಿ ಕಲಂ 498 ಎ,304 ಬಿ, 34 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಕಲಂಗಳ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಕಿರುಕುಳ ನೀಡಿ ಸಾವಿಗೆ ಕಾರಣರಾಗಿರುವ ಮತ್ತಿಬ್ಬರನ್ನೂ ಶೀಘ್ರವಾಗಿ ಬಂಧಿಸಬೇಕು. ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ದೊರಕದಂತೆ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು.
ವರದಕ್ಷಿಣೆಗಾಗಿ ಹಿಂಸೆ, ಕೌಟುಂಬಿಕ ದೌರ್ಜನ್ಯ ಎಸಗಿ ಮಹಿಳೆಯರ ಮೇಲೆ ಕ್ರೂರವಾಗಿ ವರ್ತಿಸುವವರ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಂಡು ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಸಕ್ರಿಯವಾಗಲಿ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ತಮ್ಮ ನಿರ್ದೇಶನವಿರಲಿ ಎಂಬ ಒತ್ತಾಸೆಯನ್ನು ವೇದಿಕೆ ವ್ಯಕ್ತಪಡಿಸುತ್ತದೆ.