ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಕಂಬಿ ಹಿಂದೆ ಬಂಧಿಯಾಗಿದೆ. ಈ ಕೇಸ್ ತೀವ್ರ ಸಂಚಲನ ಸೃಷ್ಟಿಸಿರುವಾಗ ಪೊಲೀಸರ ತನಿಖೆಯು ಚುರುಕಾಗಿದೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಈ ಪ್ರಕರಣದ ಮಾಹಿತಿ ಪಡೆದು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರೋ ನಟ ದರ್ಶನ್ಗೆ ಪೊಲೀಸ್ ಠಾಣೆಯಲ್ಲಿ ವಿಐಪಿ ಟ್ರೀಟ್ಮೆಂಟ್ ನೀಡಲಾಗುತ್ತಿದೆ ಅನ್ನೋ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಪೊಲೀಸ್ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸಿಎಂ ಅವರನ್ನ ಭೇಟಿಯಾಗಿದ್ದರು. ಈ ವೇಳೆ ದರ್ಶನ್ ಪ್ರಕರಣದಲ್ಲಿ ಪೊಲೀಸರು ನಡೆದುಕೊಳ್ಳುವ ರೀತಿಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾಕೆ ಸ್ಪೆಷಲ್ ಟ್ರೀಟ್ಮೆಂಟ್ ಕೊಡಬೇಕು. ಅವರು ಆರೋಪಿ. ಆರೋಪಿಗೆ ನೀಡಬೇಕಾದ ಟ್ರೀಟ್ಮೆಂಟ್ ಕೊಡಿ. ಯಾವುದೇ ಸ್ಪೆಷಲ್ ಟ್ರೀಟ್ಮೆಂಟ್ ಬೇಡ ಎಂದು ಸಿಎಂ ಖಡಕ್ ಸೂಚನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಪೊಲೀಸ್ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ್ದಾರೆ ಅಂತ ಸುದ್ದಿ ಆಗಿದೆ. ಟಿವಿ, ಪೇಪರ್ಗಳಲ್ಲೂ ಈ ಕುರಿತು ವರದಿಯಾಗಿದೆ ಎಂದು ಸಿಎಂ ಕೇಳಿದ್ದಕ್ಕೆ ಅಧಿಕಾರಿಗಳು, ದರ್ಶನ್ ಬೆಂಬಲಿಗರು ಬರಬಹುದು ಹಾಗೂ ಮಾಧ್ಯಮಗಳ ಶೂಟ್ ಮಾಡ್ತಾರೆ ಅಂತ ಶಾಮಿಯಾನ ಹಾಕಲಾಗಿದೆ ಎಂದರು. ಶಾಮಿಯಾನ ಹಾಕೋದಕ್ಕೆ ಇದು ಸಕಾರಣವಾ ನನಗೆ ಗೊತ್ತಿಲ್ಲ. ಕೊಲೆ ಆರೋಪಿಯನ್ನ ಆರೋಪಿಯಾಗಿ ನೋಡಿ. ನೋ ಸ್ಪೆಷಲ್ ಟ್ರೀಟ್ಮೆಂಟ್, ಓನ್ಲಿ ಅಕ್ಯೂಸ್ಡ್ ಟ್ರೀಟ್ಮೆಂಟ್ ಕೊಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ವಾರ್ನಿಂಗ್ ನೀಡಿದ್ದಾರೆ.