ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮ ದಿನದ ಇಂದು ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಕಲ ಸಿದ್ಧತೆಗಳು ನಡೆದಿವೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತಿರುಪತಿ ದೇವಾಲಯದ ಮಾದರಿಯಲ್ಲಿಯೇ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು, ಪ್ರಸಿದ್ಧ ಎಸ್ಬಿ ಟಾಕೀಸ್ ಸಂಸ್ಥೆಯು ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ತಿರುಪತಿ ದೇವಾಲಯ ಪ್ರಧಾನ ಅರ್ಚಕರಿಂದಲೇ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ತಿರುಮಲೆ-ತಿರುಪತಿಯಲ್ಲಿರುವಂತೆ ಶ್ರೀನಿವಾಸ ಹಾಗೂ ಪದ್ಮಾವತಿ ದೇವರುಗಳ ವಿಗ್ರಹಗಳು ಈಗಾಗಲೇ ಆಗಮಿಸಿವೆ.
ಈ ವಿಗ್ರಹಗಳ ಮೆರವಣಿಗೆಯು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಆರಂಭವಾಗಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಮೆರವಣಿಗೆಯ ಸಂಚಾರ ನಡೆಸಲಿದೆ. ಮೆರವಣಿಗೆಯಲ್ಲಿ ಸುಮಾರು 11 ಕಲಾತಂಡಗಳು ಭಾಗವಹಿಸಿ ರಂಗು ಹೆಚ್ಚಿಸಲಿವೆ. ಸುಮಾರು 2 ಗಂಟೆಗಳ ಕಾಲ ನಗರದಲ್ಲಿ ಸಂಚರಿಸಿದ ಮೆರವಣಿಗೆ ಜಿಲ್ಲಾ ಕ್ರೀಡಾಂಗಣ ತಲುಪಲಿದೆ. ನಂತರ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ.
ಶ್ರೀನಿವಾಸ ಕಲ್ಯಾಣ ಪೂಜಾ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪತ್ನಿ ಚೆನ್ನಮ್ಮ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ದಂಪತಿಗಳು ಭಾಗಿಯಾಗಲಿದ್ದು, ಬೃಹತ್ ವೇದಿಕೆಯಲ್ಲಿ ಕುಮಾರಸ್ವಾಮಿ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ವೇದಿಕೆ ಮುಂಭಾಗ ಹಾಗೂ ಸಾರ್ವಜನಿಕರಿಗೆ ಕ್ರೀಡಾಂಗಣದಲ್ಲಿ 30 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವನ್ನು ಎಲ್ಲರೂ ಕಣ್ತುಂಬಿಕೊಳ್ಳುವ ಸಲುವಾಗಿ ಕ್ರೀಡಾಂಗಣದ ಎರಡು ಬದಿಯಲ್ಲಿ ಬೃಹತ್ ಎಲ್ಇಡಿ ಪರದೆಯನ್ನು ಅಳವಡಿಸಲಾಗಿದೆ.
ಕಲ್ಯಾಣೋತ್ಸವದಲ್ಲಿ ಭಾಗಿಯಾದ ಸಾರ್ವಜನಿಕರಿಗೆ ತಿರುಪತಿಯ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಈ ಸಂಬಂಧ ಲಡ್ಡುಗಳನ್ನು ತಿರುಪತಿಯಿಂದಲೆ ತರಿಸಲಾಗಿದೆ. ಲಡ್ಡು ಜತೆಗೆ, ಪುಳಿಯೊಗರೆ ಪ್ರಸಾದ ವಿತರಣೆ. ಮಹಿಳೆಯರಿಗೆ ಭಾಗೀನ ನೀಡಲಾಗುತ್ತಿದ್ದು, ಸಾರ್ವಜನಿಕರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.