ರಾಮನಗರ: ಮಾಗಡಿ ತಾಲ್ಲೂಕಿನ ಮರೂರು ಸಮೀಪ ಕೈಗಾರಿಕಾ ಪ್ರದೇಶ ಸ್ಥಾಪನೆಯನ್ನು ಸರಕಾರ ಕೈಬಿಡುವಂತೆ ಒತ್ತಾಯಿಸಿ, ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪರ ನಿಲ್ಲುವಂತೆ ಆಗ್ರಹಿಸಿ ರೈತರು ಬಿಡದಿಯ ತೋಟದ ಮನೆ ಮುಂಭಾಗ ಧರಣಿ ನಡೆಸಿದರು.
ಮರೂರು ಬಳಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಅವಕಾಶ ನೀಡದಂತೆ ತಮ್ಮ ಬೆಂಬಲಕ್ಕೆ ನಿಲ್ಲಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಿಡದಿ ಕೇತಗಾನಹಳ್ಳಿಯ ತೋಟದ ಮನೆ ಪ್ರವೇಶ ದ್ವಾರದ ಬಳಿ ಜಮಾಯಿಸಿ ಧರಣಿ ಕುಳಿತು ಪ್ರತಿಭಟಿಸಿದರು.
ಮಾಗಡಿ ತಾಲೂಕಿನ ಮರೂರು, ನಾರಸಂದ್ರ, ಮಣಿಗನಹಳ್ಳಿ, ಹನುಮಾಪುರ, ಶಿವನಸಂದ್ರ, ಸಿಂಗ್ರಿಗೌಡನಪಾಳ್ಯ, ಹಾರನಗಟ್ಟೆಪಾಳ್ಯ, ಬೆಂಟಪ್ಪನಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಖಾಸಗಿ ಬಸ್ಸುಗಳಲ್ಲಿ ಆಗಮಿಸಿ ಬಿಡದಿಯ ಕುಮಾರಸ್ವಾಮಿ ಅವರ ತೋಟದ ಮನೆ ಮುಂಭಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಭಾವಚಿತ್ರ ಹಿಡಿದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಬೆಂಗಳೂರಿಗೆ ತೆರಳಿರುವ ವಿಷಯ ತಿಳಿದ ರೈತರು ಕುಮಾರಣ್ಣವರನ್ನು ಭೇಟಿ ಮಾಡಿ ಮುಕ್ತ ಮಾತನಾಡಿಯೇ ತೆರಳುವುದಾಗಿ ಹೇಳಿ ಪಟ್ಟು ಹಿಡಿದ ರೈತರು ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಭೋಜನ ಸೇವಿಸಿದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಶಾಸಕ ಎ.ಮಂಜುನಾಥ್ ಅವರುಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮರೂರು ಸುತ್ತಮುತ್ತಲ 8ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 3300 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿದೆ. ಈ ಸಂಬಂಧ ಈಗಾಗಲೇ 266 ರೈತರಿಗೆ ನೋಟಿಸ್ ಜಾರಿಯಾಗಿದ್ದು, ಕೃಷಿಕರ ವಿರೋಧದ ನಡುವೆಯೂ 900 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಸದರಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 700ಎಕರೆ ಪ್ರದೇಶದಲ್ಲಿ ಸಚಿವ ಅಶ್ವತ್ಥ ನಾರಾಯಣ ಒಡೆತನದ ಕೈಗಾರಿಕೆ ಸ್ಥಾವರ ಕೂಡ ಸ್ಥಾಪನೆಯಾಗಲಿದೆ.
ಹೀಗಾಗಿಯೇ ಸಚಿವರು ಮತ್ತು ಶಾಸಕರು ಒಟ್ಟಾಗಿ ಸೇರಿ ರೈತರ ವಿರೋಧದ ನಡುವೆಯೂ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಪಟ್ಟು ಹಿಡಿದಿದ್ದಾರೆ. ಬಹುತೇಕ ರೈತರಿಗೆ ಮೊದಲನೇ ನೋಟಿಸ್ ಜಾರಿ ಮಾಡಿಸಿದ್ದಾರೆ. ತುಂಡು ಭೂಮಿ ಹೊಂದಿರುವ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆಯೂ ಭೂಮಿ ಉಳಿಸಿಕೊಡುವಂತೆ ಮನವಿ ಮಾಡಿದಾಗ ಮಾಜಿ ಸಿಎಂ ಕುಮಾರಸ್ವಾಮಿರವರು ಕೆಐಎಡಿಬಿ ಭೂ ಸ್ವಾಧೀನ ಅಧಿಕಾರಿಗೆ ಪ್ರಕ್ರಿಯೆ ಸಧ್ಯಕ್ಕೆ ತಡೆ ಹಿಡಿಯುವಂತೆ ಸೂಚಿಸಿದ್ದರು. ಆದರೆ ಮರುದಿನವೇ ಸಚಿವರು ಆ ಭೂಸ್ವಾಧೀನ ಅಧಿಕಾರಿಯನ್ನು ಬೇರೆಡೆಗೆ ವರ್ಗಗೊಳಿಸಿ ತಮಗೆ ಬೇಕಾದ ಅಧಿಕಾರಿಯನ್ನು ನಿಯೋಜಸಿಕೊಂಡಿದ್ದಾರೆ ಎಂದು ದೂರಿದರು.
ಕುಮಾರಸ್ವಾಮಿರವರ ಮುಖನೋಡಿಕೊಂಡು ಕೆಳೆದ ಚುನಾವಣೆಯಲ್ಲಿ ಮಂಜುನಾಥ್ ಅವರಿಗೆ ಮತ ಹಾಕಿದ್ದೆವು. ಆದರೀಗ ಅವರೇ ರೈತರ ವಿರುದ್ಧ ನಿಂತಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಆದರೂ ಅವರು ಪ್ರತಿಷ್ಠೆಗೆ ತೆಗೆದುಕೊಂಡಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ರವರು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಬೇಕು. ಜತೆಗೆ ರೈತರ ಜತೆಗೆ ನಿಂತು ಕೃಷಿ ಭೂಮಿಯನ್ನು ಉಳಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತರಾದ ಜಯರಾಮಯ್ಯ, ಸಾಗರ್, ಶಂಕರಪ್ಪ, ಮಂಜುನಾಥ್, ಸುರೇಶ್, ಕುಮಾರ್ ಮರೂರು, ಶಿವಪ್ರಸಾದ್, ಜಗದೀಶ್, ಚಲುವಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು