ರಾಮನಗರ: ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಪಾಲಬೋವಿದೊಡ್ಡಿ ಗ್ರಾಮದ ಚಿಕ್ಕಮ್ಮದೇವಿ ದೇವಾಲಯದಲ್ಲಿ ಹುಂಡಿಯಲ್ಲಿದ್ದ ಹಣವನ್ನು ದೋಚಿರುವ ಘಟನೆ ನಡೆದಿದೆ.
ಕಿಟಕಿಯ 3ಕಂಬಿಗಳನ್ನು ಕತ್ತರಿಸಿ ದೇವಾಲಯದೊಳಗೆ ನುಗ್ಗಿರುವ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ. ಗ್ರಾಮದೇವತೆ ಶ್ರೀ ಚಿಕ್ಕಮ್ಮ ದೇವಿ ದೇಗುಲದಲ್ಲಿದ್ದ ಹುಂಡಿಯನ್ನು ಕಳೆದ 8 ವರ್ಷಗಳಿಂದ ತೆರೆದಿರಲಿಲ್ಲ. ಹುಂಡಿಯಲ್ಲಿ ಅಪಾರ ಪ್ರಮಾಣದ ಕಾಣಿಕೆ ಹಣ ಸಂಗ್ರಹವಾಗಿತ್ತು. ಇದನ್ನು ತಿಳಿದುಕೊಂಡು ಖದೀಮರು ಕೃತ್ಯ ಎಸಗಿದ್ದಾರೆ.
ದೇವಾಲಯದ ಕಿಟಕಿ ಕಂಬಿಗಳನ್ನು ಆಕ್ಸಾ ಬ್ಲೇಡ್ನಿಂದ ಕತ್ತರಿಸಿ ಒಳನುಗ್ಗಿರುವ ದುಷ್ಕರ್ಮಿಗಳು ಹುಂಡಿ ಹೊಡೆದು ಹಣವನ್ನು ಮಾತ್ರ ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರೊಂದಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.