ಮೈಸೂರು: ನಾಡಹಬ್ಬ ದಸರಾದ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಗಜಪಡೆ ತಮ್ಮ ಶಿಬಿರದತ್ತ ಮುಖ ಮಾಡಿದವು.
ಕಳೆದ ಎರಡು ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಆನೆಗಳು ಜಂಬೂ ಸವಾರಿ ಯಶಸ್ವಿಗೊಳಿಸಿದ ಖುಷಿಯಲ್ಲಿ ಒಲ್ಲದ ಮನಸ್ಸಿನಿಂದಲೇ ಕಾಡಿನತ್ತ ಪ್ರಯಾಣ ಬೆಳೆಸಿದ್ದು ಕಂಡು ಬಂದಿತು. ಅಂಬಾರಿ ಹೊತ್ತ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಲಾರಿಯಲ್ಲಿ ಕಳುಹಿಸಿಕೊಡಲಾಯಿತು. ಆದರೆ ಈ ವೇಳೆ ಕೆಲವು ಆನೆಗಳು ತಮ್ಮ ಸ್ವಸ್ಥಾನಕ್ಕೆ ಮರಳಲು ಹಿಂದೇಟು ಹಾಕಿದ್ದು ಕಂಡು ಬಂದಿತು.
ಪುರೋಹಿತ ಪ್ರಹ್ಲಾದರಾವ್ ನೇತೃತ್ವದಲ್ಲಿ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಪಾದಗಳನ್ನು ತೊಳೆದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನಂತರ ಬೂದುಗುಂಬಳ ಒಡೆದು ದೃಷ್ಟಿ ತೆಗೆದು ಆನೆಗಳಿಗೆ ವಿವಿಧ ಹಣ್ಣು ಹಂಪಲು ಹಾಗೂ ಕಬ್ಬು ನೀಡಲಾಯಿತು. ಪೂಜೆ ಬಳಿಕ ಮಾವುತರು ಹಾಗೂ ಕಾವಾಡಿಗರ ಕುಟುಂಬ ವರ್ಗದವರಿಗೆ ಉಪಹಾರ ನೀಡಿ ಆನೆಗಳೊಂದಿಗೆ ಅವರನ್ನು ಬೀಳ್ಕೊಡಲಾಯಿತು. ಆನೆ ಶಿಬಿರದತ್ತ ಮರಳಿದ ಮಾವುತರು, ಕಾವಾಡಿಗಳಿಗೆ ಅರಮನೆ ಮಂಡಳಿಯಿಂದ ತಲಾ 10 ಸಾವಿರದಂತೆ 50 ಜನರಿಗೆ 5 ಲಕ್ಷ ಗೌರವಧನ ನೀಡಲಾಯಿತು.
ದಸರಾ ಮಹೋತ್ಸವಕ್ಕೆ ಎರಡು ತಂಡಗಳಲ್ಲಿ 14ಆನೆಗಳು ಮೈಸೂರಿಗೆ ಆಗಮಿಸಿದ್ದವು. ಹೋಗುವಾಗ 1 ಆನೆ ಹೆಚ್ಚಾಗಿ 15 ಆನೆಗಳು ತವರಿಗೆ ಮರಳಿದವು. ಲಕ್ಷ್ಮೀ ಆನೆ ದಸರಾಗೆ ಬರುವಾಗಲೇ ತುಂಬು ಗರ್ಭಿಣಿಯಾಗಿದ್ದರಿಂದ ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದ್ದಳು.
ಹೀಗಾಗಿ ಈ ಬಾರಿಯ ದಸರಾ ಹೆಚ್ಚು ವಿಶೇಷವಾಯಿತು. 14ಆನೆಗಳ ಪೈಕಿ ಮರಿಗೆ ಜನ್ಮ ನೀಡಿದ್ದ ಲಕ್ಷ್ಮೀ, ಅದರ ಮರಿ ಶ್ರೀದತ್ತಾತ್ರೇಯ ಹಾಗೂ ಚೈತ್ರ ಆನೆಯನ್ನು ಶುಕ್ರವಾರ ಮುಂಜಾನೆಯೇ ಲಾರಿಯಲ್ಲಿ ಕಳುಹಿಸಲಾಯಿತು. ಬಳಿಕ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಗೋಪಿ, ಪಾರ್ಥಸಾರಥಿ, ಸುಗ್ರೀವ, ಮಹೇಂದ್ರ, ಭೀಮ, ಶ್ರೀರಾಮ, ಕಾವೇರಿ, ವಿಜಯ ಆನೆಗಳನ್ನು ಲಾರಿಗೆ ಹತ್ತಿಸಿ ಆಯಾ ಆನೆಗಳ ಶಿಬಿರಗಳಿಗೆ ಕಳುಹಿಸಲಾಯಿತು.
ಅರಮನೆ ಆವರಣದಿಂದ ಹೊರಟ ಆನೆಗಳಿಗೆ ಮೈಸೂರಿನ ಜನತೆ ಭಾವನಾತ್ಮಕ ವಿದಾಯ ಹೇಳಿದರು. ರಸ್ತೆಯಲ್ಲಿದ್ದವರು ಕೈಬೀಸಿ ಆನೆಗಳಿಗೆ ಅಭಿನಂದನೆ ಸಲ್ಲಿಸಿ ಬೀಳ್ಕೊಟ್ಟರು.