ರಾಮನಗರ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಅರ್ಕಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾದ ಪರಿಣಾಮ ಹರೀಸಂದ್ರ-ತಿಮ್ಮೇಗೌಡನದೊಡ್ಡಿ ಸಂಪರ್ಕ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಕಂಡುಬಂದಿದೆ.
ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹರೀಸಂದ್ರ ಗ್ರಾಮದ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಿಮ್ಮೇಗೌಡನದೊಡ್ಡಿ ಸಂಪರ್ಕ ಸೇತುವೆಯ ಪಿಲ್ಲರ್ ನೀರಿನ ರಭಸಕ್ಕೆ ಮುರಿದಿದ್ದು, ಇದರಿಂದ ಸೇತುವೆ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದೆ. ಹರೀಸಂದ್ರ ಗ್ರಾಮದಿಂದ ನಾನಾ ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಸುಮಾರು ೨೦ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಸಂಪರ್ಕ ಸೇತುವೆ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನದಿಯಲ್ಲಿ ನೀರು ಪ್ರವಾಹ ಹೆಚ್ಚಾಗಿತ್ತು. ನೀರಿನ ಸೆಳೆತಕ್ಕೆ ಮಣ್ಣಿನ ಸವಕಳಿ ಆಗಿ ಸೇತುವೆಯ ಪಿಲ್ಲರ್ ಕೆಳ ಭಾಗ ಮುರಿದಿದ್ದು ಇದರಿಂದ ಅಲ್ಪ ಪ್ರಮಾಣದಲ್ಲಿ ಕುಸಿತ ಉಂಟಾಗಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಳೆ ಮುಂದುವರೆದು ಮಂಚನಬೆಲೆ ಜಲಾಶಯದಿಂದ ನೀರು ಹರಿವು ಹೆಚ್ಚಾದರೆ ಸೇತುವೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ನಿಚ್ಛಳವಾಗಿವೆ.
ಬೂರಗಮರದದೊಡ್ಡಿ, ಎಲೆದೊಡ್ಡಿ, ಮಾದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪ್ರತಿ ನಿತ್ಯ ಬೆಂಗಳೂರು-ಮೈಸೂರು ಹೆದ್ದಾರಿಗೆ, ವಿದ್ಯಾರ್ಥಿಗಳು ಶಾಲೆಗೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಲು ಹರೀಸಂದ್ರ- ತಿಮ್ಮೇಗೌಡನದೊಡ್ಡಿ ಸಂಪರ್ಕ ಸೇತುವೆ ಮೂಲಕವೇ ಸಂಚರಿಸುವುದು ವಾಡಿಕೆ. ಹಾಗೊಂದು ವೇಳೆ ಸೇತುವೆಗೆ ಧಕ್ಕೆಯಾದರೆ ಗ್ರಾಮಸ್ಥರು ಸುಗ್ಗನಹಳ್ಳಿಗೆ ಇಲ್ಲವೇ ರಾಮನಗರ ಮಾರ್ಗವಾಗಿ ಸುತ್ತಾಡಿ ಪ್ರಯಾಣಿಸಬೇಕಾಗುತ್ತದೆ.
ಪ್ರಮುಖ ಸೇತುವೆಯಲ್ಲಿ ಬಿರುಕು ಬಿಟ್ಟಿರುವುದನ್ನು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೇತುವೆ ವೀಕ್ಷಣೆ ಮಾಡಿ ದುರಸ್ಥಿ ಕಾರ್ಯ ಶೀಘ್ರ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.