ರಾಮನಗರ: ಕಾಂಗ್ರೆಸ್ ಮುಖಂಡರಿರುವ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ತಾರತಮ್ಯ ಎಸಗಿ ದ್ವೇಷರಾಜಕಾರಣ ಮಾಡಿರುವ ಶಾಸಕರಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರಎಂದು ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಿಡದಿ ಹೋಬಳಿ ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಅವರು ಚುನಾವಣಾ ಪ್ರಚಾರ ನಡೆಸಿದ ವೇಳೆ ಗಾಣಕಲ್ ಗ್ರಾಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಡದಿಯಿಂದ ಮಂಚನಬೆಲೆ, ತಾವರೆಕೆರೆ, ಮಾಗಡಿ, ನೆಲಮಂಗಲ, ಚಂದ್ರಪ್ಪ ಸರ್ಕಲ್, ರಾಮೋಹಳ್ಳಿ ಹಾಗೂ ಬೆಂಗಳೂರಿಗೂ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ರಸ್ತೆ ಅಭಿವೃದ್ಧಿಗೆ ಶಾಸಕರು ಗಮನಹರಿಸಿಲ್ಲ. ನಾನು ಸೇರಿದಂತೆ ಅನೇಕ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಭಾಗದ ಗ್ರಾಮಗಳಲ್ಲಿ ಒಮ್ಮೆಯೂ ಬಂದು ಜನರ ಕಷ್ಟ-ಸುಖ ವಿಚಾರಿಸಿಲ್ಲ ಎಂದು ಶಾಸಕ ಆರೋಪಿಸಿದರು.
ಗಾಣಕಲ್ ಗ್ರಾಮದಲ್ಲಿ ಭೂ ಮಾಲೀಕರು ಹಾಗೂ ಕಂದಾಯ ಇಲಾಖೆ ನಡುವೆ ಇರುವ ಸಮಸ್ಯೆಯನ್ನು ಬಗೆಹರಿಸಿಲ್ಲ. ಹೀಗಾಗಿ ಅನೇಕ ಮನೆಗಳಿಗೆ ಹಕ್ಕುಪತ್ರ ವಿತರಿಸಿಲ್ಲ. ಬಡಕುಟುಂಬಗಳು ಮನೆ ನಿರ್ಮಿಸಿಕೊಳ್ಳಲು ಬ್ಯಾಂಕ್ನಿಂದ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ. ಗ್ರಾಮದಲ್ಲಿ ಕನಿಷ್ಠ ರಸ್ತೆ, ಚರಂಡಿ ಸಹಿತ ಯಾವ ಮೂಲಭೂತ ಸೌಕರ್ಯವೂ ಒದಗಿಸದೆ ದ್ವೇಷ ರಾಜಕಾರಣದಲ್ಲೇ ತಮ್ಮ ಅವಧಿಯನ್ನು ಮುಗಿಸಿದ ಶಾಸಕರಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎ.ಮಂಜುನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಆಡಳಿತ ಪಕ್ಷದ ಶಾಸಕರಿದ್ದಾಗ ಮಾತ್ರ ಕ್ಷೇತ್ರದಲ್ಲಿ ಪರಿಣಾಮಕಾರಿ ಕೆಲಸಗಳನ್ನು ಮಾಡಲು ಸಾಧ್ಯ. ಮಾಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದೇನೆಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಲಿದೆ. ನೀವು ಕಾಂಗ್ರೆಸ್ ಶಾಸಕನನ್ನು ಆಯ್ಕೆ ಮಾಡಿಕೊಂಡಲ್ಲಿ ಕೇವಲ ಎರಡು ತಿಂಗಳ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಹಾಗೆಯೇ ಇಲ್ಲಿರುವ ಭೂ ಮಾಲೀಕರ ಸಮಸ್ಯೆಗೆ ಒಂದು ವರ್ಷದೊಳಗೆ ಪರಿಹಾರ ಕಂಡುಹಿಡಿಯಲಾಗುವುದು ಎಂದು ತಿಳಿಸಿದರು.
ಗಾಣಕಲ್ ಗ್ರಾಮಕ್ಕೆ ಮತಯಾಚನೆ ಆಗಮಿಸಿದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಗ್ರಾಮಸ್ಥರು ಮೈಸೂರು ಪೇಟ ಧರಿಸಿ ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿದರು. ಮಹಿಳೆಯರ ಪೂರ್ಣಕುಂಭದೊಂದಿಗೆ ಜಾನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಯುವಮುಖಂಡರು ಬೃಹತ್ ಸೇಬಿನ ಹಾರ ಹಾಕಿ ಸಂಭ್ರಮಿಸಿದರು.
ಮತಯಾಚನೆಯಲ್ಲಿ ಕೆಎಂಎಫ್ ಮಾಜಿ ಅಧ್ಯಕ್ಷರು ಹಾಲಿ ಬಮೂಲ್ ಸದಸ್ಯ ಪಿ,ನಾಗರಾಜು, ಕೆಂಪೇಗೌಡಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾಮುನಿರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಬಿಡದಿಪುರಸಭೆ ಸದಸ್ಯರಾದ ಸಿ.ಉಮೇಶ್, ರಾಮಚಂದ್ರಯ್ಯ, ಹೊಂಬಯ್ಯ, ಜಿಪಂ ಮಾಜಿ ಸದಸ್ಯ ಸಿ.ಎಚ್.ಪುಟ್ಟಯ್ಯ, ಮುಖಂಡರಾದ ಹೊಸೂರುರಾಜಣ್ಣ, ಗೋಪಾಲರಾಜ್, ಹೇಮಂತ್ಕುಮಾರ್, ಗಿರಿಧರ್ ರಾಮಯ್ಯ, ವೈ.ರಮೇಶ್, ಮಹೇಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.