ರಾಮನಗರ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಬಿಡದಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಹಾಗೂ ಮೆಟ್ರೋ ರೈಲು ಯೋಜನೆಯನ್ನು ಬಿಡದಿವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದರು.
ತಾಲ್ಲೂಕಿನ ಬಿಡದಿ ಐಕಾನ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಡದಿ ಪುರಸಭೆ 23 ವಾರ್ಡ್ವಾರು ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮುಖಂಡರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದುಕೊಂಡಿದೆ. 2023ರ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್ ಅನ್ನು ಸಹಿ ಮಾಡಿ ಮನೆ ಮನೆಗೆ ಹಂಚಿಕೆ ಮಾಡಲಾಗುತ್ತಿದೆ. ಜನರಿಗೆ ಅನುಕೂಲಕ್ಕಾಗಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಸೇರಿದಂತೆ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ ಗೌರವಧನ ನೀಡುವ ಭರವಸೆ ನೀಡಲಾಗಿದೆ ಇದೂ ಕೂಡ ನಾವು ನುಡಿದಂತೆ ನಡೆಯುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಆಗಿರುವ ಯೋಜನೆಗಳ ಬಗ್ಗೆ ಹಾಗೂ ಮುಂದಿನ ಸರಕಾರದಲ್ಲಿ ಅನುಷ್ಠಾನಕ್ಕೆ ತರುವ ಗ್ಯಾರಂಟಿ ಕಾರ್ಡ್ ಕಾರ್ಯಕ್ರಮದ ಬಗ್ಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದನ್ನು ಗ್ರಾಮೀಣ ಭಾಗದ ಜನರಿಗೆ ತಿಳಿಸುವ ಕೆಲಸವಾಗಬೇಕು. ಬೇರೆ ಪಕ್ಷಗಳಿಂದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಆಕಾಂಕ್ಷೆಯಿಟ್ಟು ಬರುವ ಅನ್ಯ ಪಕ್ಷದ ಮುಖಂಡರನ್ನು ನಾವು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಬಿಡದಿ ಪುರಸಭೆ ಚುನಾವಣೆಯಲ್ಲಿ ಒಟ್ಟು 23 ವಾರ್ಡ್ಗಳ ಪೈಕಿ ಕಾಂಗ್ರೆಸ್ ೯ ವಾರ್ಡ್ಗಳನ್ನು ಗೆಲ್ಲಲು ಸಾಧ್ಯವಾಗಿದೆ. ಕಳೆದುಕೊಂಡಿರುವುದನ್ನು ವಾಪಸ್ ಪಡೆದುಕೊಳ್ಳಲು ಕಂಕಣಬದ್ಧರಾಗಬೇಕು. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕೇವಲ 30 ದಿನಗಳು ಮಾತ್ರ ಉಳಿದಿದೆ. ನಿರಂತರವಾಗಿ ಜನರ ಬಳಿ ಹೋಗಿ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಚುನಾವಣೆ 3 ದಿನ ಇದ್ದಾಗ ಹೋಗಿ ಮನೆ ಬಾಗಿಲು ತಟ್ಟಿದರೆ ಪ್ರಯೋಜನವಿಲ್ಲ. ಇಂದಿನಿಂದಲೇ ಗುರಿ ಮುಟ್ಟುವ ಪ್ರಯತ್ನ ಮಾಡಿದರೆ ಬದಲಾವಣೆ ತರಲು ಸಾಧ್ಯ ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ಸುರೇಶ್ ಕಿವಿಮಾತು ಹೇಳಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ನಮಗೆ ಅಭಿವೃದ್ಧಿಯೇ ಮೂಲ ಮಂತ್ರ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಜನರು ನಿರೀಕ್ಷೆ ಮಾಡಿದಂತೆ ಅಭಿವೃದ್ಧಿ ಕೆಲಸಗಳಾಗಿಲ್ಲ. ಇಲ್ಲಿ ವಿರೋಧ ಪಕ್ಷದವರೇ ಶಾಸಕರಾಗಿ ಆಯ್ಕೆಯಾಗುತ್ತಿರುವ ಕಾರಣ ನಿರೀಕ್ಷಿತ ಅಭಿವೃದ್ಧಿ ಮಾಡಲಾಗುತ್ತಿಲ್ಲ. ಆದ್ದರಿಂದ ಆಡಳಿತ ಪಕ್ಷದ ಶಾಸಕನನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಾತಾವರಣ ಇರುವುದರಿಂದ ನನ್ನನ್ನು ಗೆಲ್ಲಿಸುವ ಮೂಲಕ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಕೈ ಬಲಪಡಿಸುವಂತೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರು ಮಾತನಾಡಿದರು. ಹಾಗೆಯೇ ವಾರ್ಡ್ವಾರು ಮುಖಂಡರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಗಡಿಯ ಕಲ್ಕೆರೆ ಶಿವಣ್ಣ, ಬಿಡದಿಯ ಎಚ್.ಎಸ್.ಯೋಗಾನಂದ, ಹೆಗ್ಗಡಗೆರೆ ಅಭಿಷೇಕ್ಗೌಡ, ಇಟ್ಟಮಡು ಗ್ರಾಮದ ಉದಯಕುಮಾರ್, ಮರೀಗೌಡ, ಕೃಷ್ಣ, ಕೆಂಚನಕುಪ್ಪೆ ಜನತಾ ಕಾಲೋನಿಯ ನಾಡಗೌಡ ರವಿ, ಲಾರಿ ಶಿವರಾಜು ಮುಂತಾದವರನ್ನು ಸಂಸದ ಡಿ.ಕೆ.ಸುರೇಶ್ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಜಿಲ್ಲಾ ಪರಿಶಿಷ್ಟ ವಿಭಾಗದ ಅಧ್ಯಕ್ಷ ನರಸಿಂಹಯ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಾಮುನಿರಾಜು, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು, ಪುರಸಭೆ ಸದಸ್ಯರಾದ ಸಿ.ಉಮೇಶ್, ರಾಮಚಂದ್ರಯ್ಯ, ನವೀನ್, ಶ್ರೀನಿವಾಸ, ಮಾಜಿ ಉಪಾಧ್ಯಕ್ಷ ಸಿ.ಲೋಕೇಶ್, ಮಾಜಿ ಸದಸ್ಯರಾದ ಮಹೀಪತಿ, ವೈ.ರಮೇಶ್, ಮುಖಂಡರಾದ ಹರೀಶ್ಪಟೇಲ್, ಉಮಾಶಂಕರ್, ಅಬ್ಬನಕುಪ್ಪೆ ರಮೇಶ್, ಸತೀಶ್ಚಂದ್ರ, ಜೀವನ್ಬಾಬು, ರೇಣುಕಯ್ಯ ಮುಂತಾದವರು ಹಾಜರಿದ್ದರು.