ರಾಮನಗರ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನಕ್ಕೆ ಅಪೇಕ್ಷೆ ಪಡುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾತ್ರಾರ್ಥಿಗಳ ಪುಣ್ಯ ಯಾತ್ರೆಗೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಇಕ್ಬಾಲ್ ಚಾಲನೆ ನೀಡಿದ್ದಾರೆ.
ನಗರದ ಕೆಂಪೇಗೌಡನದೊಡ್ಡಿ ಬಳಿ ಕಸಬಾ ಮತ್ತು ಕೈಲಾಂಚ ಹೋಬಳಿಯ ಯಾತ್ರಾರ್ಥಿಗಳಿದ್ದ ಬಸ್ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಇಕ್ಬಾಲ್ ಹುಸೇನ್, ಧರ್ಮಸ್ಥಳವು ಧರ್ಮ ಮತ್ತು ಸತ್ಯಕ್ಕೆ ಹೆಸರಾಗಿದೆ. ಶ್ರೀ ಕ್ಷೇತ್ರಕ್ಕೆ ಅಪೇಕ್ಷಿತ ಯಾತ್ರಾರ್ಥಿಗಳನ್ನು ಕಳುಹಿಸಬೇಕೆಂಬುದು ನನ್ನ ಬಹು ದಿನಗಳ ಕನಸಾಗಿತ್ತು. ದೇವರಲ್ಲಿ ನಿಮ್ಮ ಕಷ್ಟಗಳಿಗೆ ಪರಿಹಾರ ಕೇಳುವುದು ಮಾತ್ರವಲ್ಲದೆ ನನಗೂ ಮತ್ತಷ್ಟು ಸಮಾಜ ಸೇವೆ ಸಲ್ಲಿಸುವ ಶಕ್ತಿ ನೀಡುವಂತೆ ಪ್ರಾರ್ಥಿಸಿ ಎಂದು ಯಾತ್ರಾರ್ಥಿಗಳಿಗೆ ತಿಳಿಸಿದರು.
ಹಿಂದಿನ ಚುನಾವಣೆಯಲ್ಲಿ 70 ಸಾವಿರ ಮತಗಳನ್ನು ನೀಡಿ ಆರ್ಶಿರ್ವದಿಸಿದ್ದೀರಿ. ಸೋತರು ಸಹ ನಿಮ್ಮ ಜೊತೆಯಲ್ಲಿಯೇ ಉಳಿದು ಮನೆಯ ಮಗನಂತೆ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದೇನೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುವ ಮೂಲಕ ನಿಮ್ಮಗಳ ಸೇವೆ ಮಾಡಲು ನನಗೂ ಅವಕಾಶ ನೀಡಬೇಕು. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು, ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ.
ಕಾಂಗ್ರೆಸ್ ಪಕ್ಷ ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು 2ಸಾವಿರ ರುಪಾಯಿ ಹಾಗೂ ಪ್ರತಿ ಕುಟುಂಬಕ್ಕೆ 10ಕೆ.ಜಿ ಅಕ್ಕಿ ವಿತರಿಸುವ ಪ್ರಣಾಳಿಕೆ ಘೋಷಣೆ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ರಾಜು, ನಗರಸಭೆ ಸದಸ್ಯ ಕೆ.ಶೇಷಾದ್ರಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಸದಸ್ಯ ಕೆ.ರಮೇಶ್ , ನಗರಸಭೆ ಸದಸ್ಯೆ ಆಯಿಷಾ ಬಾನು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ನಗರ ಘಟಕದ ಕಾಂಗ್ರೆಸ್ ಅದ್ಯಕ್ಷ ಎ.ಬಿ.ಚೇತನ್ಕುಮಾರ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ವಿ.ಎಚ್.ರಾಜು, ಮಾಜಿ ಅಧ್ಯಕ್ಷ ಜಯರಾಮಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಂಗಳಶಂಭೂಗೌಡ ಮತ್ತಿತರರು ಹಾಜರಿದ್ದರು.