ರಾಮನಗರ: ಗ್ರಾಮಕ್ಕೆ 12 ಆನೆಗಳ ಗುಂಪೊಂದು ರಾತ್ರಿ ನುಗ್ಗಿದ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ಹಾವಳಿಯಿಂದ ಕಬ್ಬಾಳು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಆನೆಗಳ ಗುಂಪನ್ನು ಕಾಡಿಗಟ್ಟುವಂತೆ ಮನವಿ ಮಾಡಿದ್ದಾರೆ. ಸದ್ಯ ಕಾಡಾನೆ ಗುಂಪು ಕಬ್ಬಾಳು ಕಡೆಯಿಂದ ಕಾಂಚನಹಳ್ಳಿ ಕಡೆ ತೆರಳಿದೆ ಎಂಬ ಮಾಹಿತಿ ಸಿಕ್ಕಿದೆ. ಗ್ರಾಮದ ರಸ್ತೆಯಲ್ಲಿ ಕಾಡಾನೆಗಳು ಸಾಲಾಗಿ ಹೋಗುವ ದೃಶ್ಯ ಮೊಬೈಲ್ನಲ್ಲಿ ಸೆರೆ ಆಗಿದೆ.
ಕೆಲ ದಿನಗಳ ಹಿಂದೆ ಓರ್ವ ರೈತನನ್ನು ಕಾಡಾನೆಗಳು ಬಲಿ ಪಡೆದಿದ್ದವು. ಜಮೀನಿಗೆ ನೀರು ಹರಿಸಲು ತೆರಳಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ಪಡೆದಿತ್ತು. ಹೀಗಾಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು ಕಾಡಾನೆಗಳನ್ನು ಕಾಡಿಗಟ್ಟಿ ಎಂದು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.