ರಾಮನಗರ: ಮನುಷ್ಯನಿಗೆ ಹೊಸ ತಿಳುವಳಿಕೆ ಹಾಗೂ ಅನುಭವ ನಿರಂತರವಾಗಿ ಆಗುತ್ತಲೇ ಇರುತ್ತದೆ. ಪ್ರಾಮಾಣಿಕತೆಯಿಂದ ಯಶಸ್ವಿಯಾದವರನ್ನು ಸಮಾಜ ಗುರುತಿಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ನಗರದ ಶಾಂತಿನಿಕೇತನ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಟಾಪರ್ರ್ಸ್ ಡೇ ಮತ್ತು ಪ್ರೆಷರ್ರ್ಸ್ ಡೇ ಕಾರ್ಯಕ್ರಮನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಇತ್ತೀಚಿಗೆ ಪ್ರಾಮಾಣಿಕತೆಗೆ ಮಾನ್ಯತೆ ಇಲ್ಲವಾಗಿದ್ದು ನೀತಿ ಪಾಠ ಹೇಳುವುದರಿಂದ ಯಾವ ಪ್ರಯೋಜನವಿಲ್ಲದಂತಾಗಿದೆ. ಪೋಷಕರು ಸಹ ಮಕ್ಕಳ ಮೇಲೆ ನಿಗಾ ವಹಿಸಬೇಕಾಗಿದೆ. ನಾನು ಶಿಕ್ಷಣ ತಜ್ಞನಲ್ಲ. ನಾನು ಪ್ರತಿ ಹಂತದಲ್ಲಿಯೂ ಕೆಲಸ ಮಾಡಿದವನು. ಲೋಕಾಯುಕ್ತದಲ್ಲಿ ಕೆಲಸ ಮಾಡಿ ಒಂದಷ್ಟು ತಿಳುವಳಿಕೆ ಪಡೆದುಕೊಂಡಿದ್ದೇನೆ ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಕೊಲೆ, ಸುಲಿಗೆ ಪ್ರಕರಣದಲ್ಲಿ ಜೈಲು ಪಾಲಾದವರು ಜಾಮೀನಿನ ಮೇಲೆ ಬಿಡುಗಡೆ ಆದಾಗ ಅವರಿಗೆ ಅದ್ದೂರಿ ಸ್ವಾಗತ ಕೋರುವ ದೃಶ್ಯವನ್ನು ನಾವು ಕಾಣುತ್ತಿದ್ದೇವೆ. ಅವರು ಜಾಮೀನಿನ ಮೇಲೆ ಬಂದವರು ಎಂಬುದನ್ನು ಮರೆಯಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧೀಜಿ ಅವರು ಸಹ ಜೈಲಿಗೆ ಹೋಗಿ ಬಂದವರು, ಅವರ ರೀತಿ ಸ್ವಾತಂತ್ರ್ಯಕ್ಕಾಗಿ ಇವರು ಹೋರಾಟ ನಡೆಸಿದವರಲ್ಲ. ಭ್ರಷ್ಟಾಚಾರಿಗಳು ಹಾಗೂ ಜೈಲಿಗೆ ಹೋಗಿ ಬಂದವರನ್ನು ಹಾರ ತುರಾಯಿ ಹಾಕಿ ಗೌರವಿಸುವುದು ಸಮಾಜದ ಅಧೋಗತಿಗೆ ಕಾರಣವಾಗಲಿದೆ ಎಂದು ವಿಷಾಧಿಸಿದರು
ಇತ್ತೀಚಿನ ದಿನಗಳಲಿ ಸರ್ಕಾರ ನಡೆಸುವವರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಒಂದು ಪಕ್ಷ 40 ಪರ್ಸೆಂಟ್ ಅಂತಾರೆ. ಮತ್ತೊಬ್ಬರು 10 ಪರ್ಸೆಂಟ್ ಅಂತಾರೆ. ಆದರೆ ಅಡಿಕೆ ಕದ್ದರು ಕಳ್ಳನೇ, ಆನೆ ಕದ್ದರೂ ಕಳ್ಳನೆ ಎಂಬುದು ಅವರಿಗೆಲ್ಲಾ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋವಿಂದರಾಜು ಮಾತನಾಡಿ, ಜಿಲ್ಲೆಯು ಪಿಯು ಫಲಿತಾಂಶದಲ್ಲಿ ಈ ಹಿಂದೆ 26ನೇ ಸ್ಥಾನದಲ್ಲಿತ್ತು. ಕಳೆದ ವರ್ಷದ ಫಲಿತಾಂಶದಲ್ಲಿ 17ನೇ ಸ್ಥಾನಕ್ಕೆ ಏರಿಕೆಯಾಗಿದೆ. ಸತತ 9ನೇ ಸ್ಥಾನ ಏರಿಕೆಯಾಗಲು ಸಾಕಷ್ಟು ಶ್ರಮವಿದೆ. ಅಧಿಕಾರಿಗಳ ಕಾಲೇಜು ಭೇಟಿ, ವಿವಿಧ ಕ್ರಮಗಳ ಫಲವಾಗಿ ಉತ್ತಮ ಫಲಿತಾಂಶ ಬಂದಿದೆ. ಈ ವರ್ಷ ಒಂದಂಕಿ ಯೊಳಗೆ ಫಲಿತಾಂಶ ತರಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆರ್. ಕುಮಾರಸ್ವಾಮಿ ಅವರು ಮಾತನಾಡಿ, ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶದಲ್ಲಿ ಶೇ.98ರಷ್ಟು ಅಂಕಗಳಿಸಿದರು ಕಣ್ಣೀರು ಹಾಕುವುದನ್ನು ನೋಡಿದ್ದೇನೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಯಾರಿ ಬಹು ಮುಖ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಕಳೆದ ಸಾಲಿನ ದ್ವೀತಿಯ ಪಿಯುಸಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶ್ರೀಚಾಮುಂಡೇಶ್ವರಿ ಎಜ್ಯುಕೇಷನ್ ಟ್ರಸ್ಟ್ನ ಖಜಾಂಚಿ ಪುಟ್ಟಮಾದಯ್ಯ, ನಿರ್ದೇಶಕಿ ಸೌಮ್ಯಕುಮಾರ್, ಸಿಇಒ ಸಾಂಬಶಿವರಾವ್, ಪ್ರಾಂಶುಪಾಲ ದಿಲೀಪ್, ಸಂಯೋಜನ ನಾರಾಯಣ್ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.