ರಾಮನಗರ: ದೇಶದಲ್ಲೆಡೆ ಕಾಂಗ್ರೆಸ್ಸನ್ನು ನಿಷೇಧ ಮಾಡಲು ಜನರು ತೀರ್ಮಾನಿಸಿರುವಾಗ ಭಜರಂಗದಳವನ್ನು ಅವರು ನಿಷೇಧ ಮಾಡಲು ಸಾಧ್ಯವೇ? ಎಂದು ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಆರ್.ಪ್ರಸಾದ್ಗೌಡ ಪ್ರಶ್ನಿಸಿದರು.
ತಾಲ್ಲೂಕಿನ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ವೇಳೆ ಹೊಸದೊಡ್ಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮನೆಂದರೇ ದೇಶದ ಶಕ್ತಿ, ಆ ಮಹಾನ್ ಶಕ್ತಿಯ ಹೆಸರನ್ನು ಇಟ್ಟಿರುವ ಸೇನೆಯವರು ನಮ್ಮ ಸಂಪ್ರದಾಯವನ್ನು ಕಾಪಾಡಲು ಪ್ರಾಣತ್ಯಾಗ ಮಾಡುತ್ತಿದ್ದಾರೆ. ಇಂತಹ ಸೇನೆಯನ್ನು ನಿಷೇಧಸುವ ಹೇಳಿಕೆ ಕೊಟ್ಟವರಿಗೆ ಭಗವಂತ ಎಚ್ಚರಿಕೆ ಕೊಟ್ಟಿದ್ದಾರೆ. ಅದಕ್ಕಾಗಿಯೇ ಅವರು ಎಚ್ಚೆತ್ತುಕೊಂಡು ಹನುಮ ನಿಗಮ ಸ್ಥಾಪನೆ ಮಾಡುತ್ತೇವೆಂದು ಹೇಳುತ್ತಿದ್ದಾರೆ ಎಂದರು.
ಕ್ಷೇತ್ರದಲ್ಲೆಡೆ ಬಿಜೆಪಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ಜನರು ಎರಡು ಪಕ್ಷದವರನ್ನು ನೋಡಿದ್ದಾರೆ. ಹೊಸಮುಖ ನೋಡುವ ಅಭಿಲಾಷೆ ಜನರಲ್ಲಿದ್ದು ತಾವು ಗೆಲ್ಲುವ ಲಕ್ಷಣಗಳಿವೆ. ನಿಮ್ಮ ಜೊತೆಗೆ ನಾವು ನಿಲ್ಲುತ್ತೇವೆ ಒಳ್ಳೆಯ ಕೆಲಸ ಮಾಡಿ ಎಂದು ಮತದಾರರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಟಯೋಟಾ ಕಿರ್ಲೋಸ್ಕರ್ ಕಾರ್ಖಾನೆಗೆ ಬೀಗ ಹಾಕಿಸಲು ಕಾಂಗ್ರೆಸ್ನವರು ಸಂಚು ನಡೆಸಿದ್ದರು. ಆದರೆ ರೀಓಪನ್ ಮಾಡಿಸಿದ್ದು ಶಾಸಕ ಎ.ಮಂಜುನಾಥ್ ಅಲ್ಲ, ಅದರ ಕ್ರೆಡಿಟ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರಿಗೆ ಸಲ್ಲುತ್ತದೆ. ಇದರಿಂದ ಉದ್ಯೋಗ ಸೃಷ್ಟಿ ಮತ್ತು ಪ್ರಗತಿ ಸಹ ಆಗಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ೧೩೫ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇಂತಹ ಸಮಯದಲ್ಲಿ ಮಾಗಡಿಯಲ್ಲಿ ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ, ಪಕ್ಷದ ವರಿಷ್ಟರ ಸೂಚನೆಯಂತೆ ಪ್ರಚಾರ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಗಡಿಯಲ್ಲಿ ಅಶ್ವಥ್ ನಾರಾಯಣ ಅವರು ಬಿಜೆಪಿ ಅಭ್ಯರ್ಥಿ ಠೇವಣಿ ಉಳಿಸಿಕೊಳ್ಳಲಿ ಎಂದು ಮಾಜಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ಬಾಲಕೃಷ್ಣ ಹಳಬರಿದ್ದಾರೆ ಚೆನ್ನಾಗಿ ಮಾತನಾಡುತ್ತಾರೆ. ಮಾತಿನಲ್ಲಿ ನಿಸ್ಸೀಮರು ಕೆಲಸ ಮಾಡುವುದು ಕಮ್ಮಿ, ನಾವು ಮಾತನಾಡುವುದು ಕಮ್ಮಿ ಕೆಲಸ ಹೆಚ್ಚು ಮಾಡುತ್ತೇವೆ. ಆಗಾಗಿ ನಾನು ಠೇವಣಿ ಉಳಿಸಿಕೊಳ್ಳುವುದಿರಲಿ, ಮೊದಲು ಬಾಲಕೃಷ್ಣ ಗೆಲ್ಲಲಿ ನೋಡೋಣ ಎಂದು ತಿರುಗೇಟು ನೀಡಿದರು. ಇದೇ ವೇಳೆ ಹೆಜ್ಜಾಲ, ಎಸ್ವಿಟಿ ಕಾಲೋನಿ, ಮಂಚನಾಯ್ಕನಹಳ್ಳಿ, ಹನುಮಂತನಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಸಾದ್ಗೌಡ ಪ್ರಚಾರ ನಡೆಸಿದರು.
ಜಿಲ್ಲಾ ಕೆಡಿಪಿ ಸದಸ್ಯ ಲೋಕೇಶ್, ತಾಲ್ಲೂಕು ಕೆಡಿಪಿ ಸದಸ್ಯ ನಾರಾಯಣರೆಡ್ಡಿ, ಮುಖಂಡರಾದ ಬಾಳೆಮಂಡಿ ಶಿವಣ್ಣ, ರೇವಣ್ಣ, ಪ್ರಸನ್ನ, ಮರಿಸ್ವಾಮಿ, ರಾಕೇಶ್, ರಾಘವೇಂದ್ರ, ನಾಗರಾಜು, ತಿಮ್ಮಪ್ಪ, ಚಲುವರಾಜು, ಕಿಟ್ಟಿ, ರವಿ ಮುಂತಾದವರು ಇದ್ದರು.