ರಾಮನಗರ: ನಗರದಲ್ಲಿ ವಾಣಿಜ್ಯ ಕೇಂದ್ರಗಳ ಮೇಲೆ ದಾಳಿ ಮುಂದುವರೆಸಿದ ನಗರಸಭೆ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ದ ದಂಡ ವಿಧಿಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರಸಭೆ ಪೌರಾಯುಕ್ತ ನಾಗೇಶ್ ನೇತೃತ್ವದ ತಂಡ ನಗರದ ಎಂ.ಜಿ.ರಸ್ತೆ, ರೈಲ್ವೆ ನಿಲ್ದಾಣದ ರಸ್ತೆ, ಕೋರ್ಟ್ ಹಿಂಭಾಗದ ರಸ್ತೆ, ಬೆಂಗಳೂರು, ಮೈಸೂರು ರಸ್ತೆಯಲ್ಲಿನ ಪ್ರಮುಖ ದಿನಸಿ ಅಂಗಡಿ, ಬಟ್ಟೆ ಅಂಗಡಿ, ಹೋಟೆಲ್ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು, ಪತ್ತೆಯಾದ ಪ್ರಮಾಣದ ಆಧಾರದ ಮೇಲೆ ದಂಡ ಪ್ರಯೋಗ ಮಾಡಿದರು.
ನಗರದ ಕೋರ್ಟ್ ರಸ್ತೆಯ ದಿನಸಿ ಅಂಗಡಿಯಲ್ಲಿ ಹೆಚ್ಚು ಪ್ಲಾಸ್ಟಿಕ್ ಕವರ್ ಹಾಗೂ ಪದಾರ್ಥಗಳು ಪತ್ತೆಯಾದ ಹಿನ್ನಲೆಯಲ್ಲಿ ಮಾಲೀಕನಿಗೆ ೫ ಸಾವಿರ ರೂ ದಂಡ ವಿಧಿಸಿದರು. ಉಳಿದಂತೆ ವಿವಿಧ ಕಡೆ ಕಾರ್ಯಾಚರಣೆ ನಡೆಸಿ ಒಟ್ಟು ೧೦ ಸಾವಿರ ರೂ ವರೆಗೆ ದಂಡ ವಸೂಲಿ ಮಾಡಿದರು. ಇದೇ ವೇಳೆ ಪ್ಲಾಸ್ಟಿಕ್ ಪತ್ತೆಯಾದ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು ಮತ್ತೊಮ್ಮೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸಲಹೆ ನೀಡಿದರು.
ಈ ವೇಳೆ ಪೌರಾಯುಕ್ತ ನಾಗೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಪ್ರಯುಖ ರಸ್ತೆಯಲ್ಲಿನ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ಹಲವು ಮಳಿಗೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ಪತ್ತೆವಾಗಿದೆ. ಇವುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ಇತ್ತೀಚಿಗೆ ಎಲ್ಲಾ ಕಡೆ ಬ್ಯಾನರ್ಗಳನ್ನು ಅಳವಡಿಕೆ ಮಾಡಲಾಗುತ್ತಿರುವುದು ಕಂಡು ಬರುತ್ತಿದೆ. ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಬ್ಯಾನರ್ ಹಾವಳಿ ತಪ್ಪಿಸುವ ಸಂಬಂಧ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲಾ ಸದಸ್ಯರು ಈ ಸಂಬಂಧ ಕೈ ಜೋಡಿದ್ದಾರೆ ಎಂದು ಹೇಳಿದರು.
ರಾಜಕೀಯ ಪಕ್ಷದ ಮುಖಂಡರು ಸಹ ಬ್ಯಾನರ್ ಹಾಕುವ ಮುನ್ನ ಅನುಮತಿ ಪಡೆದುಕೊಳ್ಳಬೇಕು. ಜತೆಗೆ, ಹಿಂಬಾಲಕರು ಹಾಗೂ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಬ್ಯಾನರ್ ಅಳವಡಿಕೆ, ಹಬ್ಬದ ಶುಭಾಶಯಗಳು ಸೇರಿದಂತೆ ಪ್ರತಿಯೊಂದು ಬ್ಯಾನರ್ ಅಳವಡಿಕೆಗೆ ಇದು ಅನ್ವಯವಾಗಲಿದೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘನೆ ಮಾಡಿದರೆ, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.