ರಾಮನಗರ: ತಾಲ್ಲೂಕಿನ ಬಿಡದಿ ಪಟ್ಟಣದ ಹಾದಿ ಬೀದಿಗಳಲ್ಲಿ ಕಸದ ರಾಶಿಗಳು ತುಂಬಿತುಳುಕುತ್ತಿದ್ದು, ಇದರಿಂದ ನೊಣ, ಸೊಳ್ಳೆಗಳು ಹೆಚ್ಚಾಗಿದ್ದು, ಜನ ಅನೈರ್ಮಲ್ಯದ ನಡುವೆ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿಯಾಗುತ್ತಿರುವ ಕಸ ಆಗಿಂದಾಗ್ಗೆ ವಿಲೇವಾರಿಯಾಗದ ಕಾರಣದಿಂದ ಬಿಡದಿಯ ಪೇಟೆ ಬೀದಿ ಸೇರಿದಂತೆ ಪಟ್ಟಣದಲ್ಲಿ ತ್ಯಾಜ್ಯದ ರಾಶಿಗಳ ಸಂಖ್ಯೆ ಹೆಚ್ಚಾಗಿದೆ. ಕಸ ವಿಲೇವಾರಿ ಕಾರ್ಯ ಮೂರು ನಾಲ್ಕು ದಿನಗಳಿಗೊಮ್ಮೆ ನಡೆಯುತ್ತಿರುವುದರಿಂದ ಬೀದಿ ನಾಯಿಗಳು ಕಸವನ್ನು ರಸ್ತೆಗೆ ಎಳೆದು ಹರಡುತ್ತಿವೆ. ಬಹುತೇಕ ವಾರ್ಡುಗಳಲ್ಲಿ ಕಸದ ರಾಶಿಗಳು ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ದುರ್ನಾತ ಬೀರುತ್ತಿರುವುದು ಕಂಡುಬಂದಿದೆ.
ಪುರಸಭೆ ವ್ಯಾಪ್ತಿಯ ಕೆಲವು ವಸತಿ ಪ್ರದೇಶದಲ್ಲಿ ಪ್ರತಿದಿನ ಮುಂಜಾನೆ ಕಸ ಸಂಗ್ರಹಣೆ ಕಾರ್ಯ ನಡೆಯುತ್ತಿದೆ. ರಸ್ತೆ ಬದಿಯಲ್ಲಿ ಕಸ ಹಾಕದಂತೆ ಪುರಸಭೆ ಸಿಬ್ಬಂದಿ ಎಚ್ಚರಿಕೆ ಫಲಕ ಹಾಕಿದರೂ ಜನರು ಹಾದಿ ಬೀದಿಯಲ್ಲಿ ಕಸ ಎಸೆಯುವುದು ನಿಲ್ಲಿಸಿಲ್ಲ. ತಮ್ಮ ಮನೆಯ ಸಮೀಪದಲ್ಲಿ ತ್ಯಾಜ್ಯ ಸುರಿಯುವುದರಿಂದ ನೊಣಗಳ ಹಾವಳಿ ಮತ್ತು ದುರ್ವಾಸನೆಯ ಯಾತನೆ ಅನುಭವಿಸಬೇಕೆನ್ನುವ ಅರಿವಿದ್ದರೂ ಸಹ ಕೆಲವರು ಕಸ ತಂದು ರಸ್ತೆ ಬದಿಗೆ ಎಸೆಯವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಇಂತಹವರ ಅನಾಗರಿಕತೆಯ ಧೋರಣೆಯಿಂದ ಸಮಸ್ಯೆ ಉಲ್ಬಣವಾಗುತ್ತಿದೆ.
ಬಿಡದಿ ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಯಾಗದ ಕಾರಣ ಸಮಸ್ಯೆ ಪೆಡಂಭೂತವಾಗಿ ಬೆಳೆದುನಿಂತಿದೆ. ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸರಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಈವರೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸುಮಾರು ಮೂರು ದಶಕಗಳಿಂದ ಬಿಡದಿಯ ಜನಸಾಮಾನ್ಯರು ಮತ್ತು ಚುನಾಯಿತ ಪ್ರತಿನಿಧಿಗಳು ಸಲ್ಲಿಸಿರುವ ನಿರಂತರ ಕೋರಿಕೆಗಳನ್ನು ಬುಟ್ಟಿಗೆಸೆದಿರುವ ಸರಕಾರಿ ಅಧಿಕಾರಿಗಳು ತಮ್ಮ ತಾತ್ಸಾರವನ್ನು ಮುಂದುವರೆಸಿದ್ದಾರೆ. ಕಸದ ರಾಶಿಗಳಿಂದ ಬರುವ ದುರ್ವಾಸನೆ ಮತ್ತು ನೊಣಗಳು ಹಾವಳಿಯಿಂದ ಬೆಸತ್ತಿರುವ ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಬೆಂಗಳೂರಿಗೆ ತೀರಾ ಸಮೀಪದಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬಿಡದಿ ಪಟ್ಟಣದಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಕಸ ವಿಲೇವಾರಿಗೆ ಸೂಕ್ತ ಜಾಗ ದೊರಕಿಸಿಕೊಡುವಂತೆ ಹಿಂದಿನ ಗ್ರಾಮ ಪಂಚಾಯಿತಿ ಆಡಳಿತ ಸೇರಿದಂತೆ ಪುರಸಭೆ ಜನಪ್ರತಿನಿಧಿಗಳು ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿವೆ. ಬಿಡದಿ ಪುರಸಭೆಯಾಗಿ ಏಳು ವರ್ಷಗಳು ಕಳೆದರೂ ಸಮಸ್ಯೆ ಕಾಡುತ್ತಿದೆ. ಬಿಡದಿಯ ಶೇಷಗಿರಿಹಳ್ಳಿ ಬಳಿ ಕಸ ಸಂಸ್ಕರಣಾ ಘಟಕಕ್ಕೆ ಜಾಗ ಗುರುತಿಸಲಾಗಿದ್ದರೂ ಸ್ಥಳೀಯರ ವಿರೋಧ ಎದುರಾಗಿದೆ. ಹೀಗಾಗಿ ಸ್ಥಳದ ಕೊರತೆಯಿಂದ ಸಮರ್ಪಕ ಕಸ ವಿಲೇವಾರಿಗೆ ಸ್ಥಳೀಯ ಪುರಸಭೆ ಪರಿತಪಿಸುತ್ತಿದೆ.
ಸುಮಾರು 50 ಸಾವಿರಕ್ಕೂ ಅಧಿಕ ಪ್ರಮಾಣದ ಜನಸಂಖ್ಯೆ ಹೊಂದಿರುವ ಬಿಡದಿ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಮರ್ಪಕ ವಿಲೇವಾರಿ ಮಾಡುವುದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸವಾಲಾಗಿದೆ. ಕಸ ವಿಲೇವಾರಿ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಸಾರ್ವಜನಿಕರಿಂದ ಕಂದಾಯ ವಸೂಲು ಮಾಡುವ ಸರಕಾರ ಪ್ರತಿ ಗ್ರಾಮದಲ್ಲೂ ಸ್ಮಶಾನಕ್ಕೆ ಜಾಗ ನಿಗದಿ ಮಾಡುವಂತೆ ಕಸ ಸಂಸ್ಕರಣೆಗೂ ಸೂಕ್ತ ಸ್ಥಳವನ್ನು ಮೀಸಲಿರಿಸಬೇಕು ಎಂದು ಆಗ್ರಹಿಸಿದ್ದಾರೆ.