ರಾಮನಗರ: ಪೋಷಕರು ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ತಮ್ಮ ಆಸೆ ಆಕಾಂಕ್ಷೆಗಾಗಿ ಮಕ್ಕಳನ್ನು ಬಾಲ್ಯದಿಂದಲೇ ಕೇವಲ ಓದಿಗೆ ಕಟ್ಟಿಹಾಕುವುದು ಸರಿಯಲ್ಲ ಎಂದು ಕಿಸ್ ಮತ್ತು ರಾಯಲ್ ಕನ್ನಡ ಚಿತ್ರದ ನಾಯಕನಟ ವಿರಾಟ್ ಹೇಳಿದರು.
ತಾಲ್ಲೂಕಿನ ಬಿಡದಿಯ ತ್ಯಾಗರಾಜ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ನಡೆದ 2 ದಿನಗಳ ಟಿಸಿಎಸ್ ಫೆಸ್ಟ್-2ಕೆ23 ಸಾಂಸ್ಕೃತಿಕ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಒತ್ತಡ ಹಾಕದೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದನ್ನರಿತು ಪ್ರೋತ್ಸಾಹ ನೀಡಿದಾಗ ಮಾತ್ರ ಉತ್ತಮ ಶಿಕ್ಷಣವನ್ನು ಹೊಂದಲು ಸಾಧ್ಯ. ಬದುಕಿನಲ್ಲಿ ಎಲ್ಲವನ್ನೂ ಗಳಿಸಬಹುದು ಆದರೆ ಬಾಲ್ಯದ ಜೀವನ ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಮಕ್ಕಳ ಸಂಭ್ರಮಗಳಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂದರು.
ಸಂಸ್ಥೆಯು ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಳ್ಳಲು ತುಂಬಾ ಸಂತೋಷವಾಗುತ್ತಿದೆ. ಇಲ್ಲಿನ ಸಂಭ್ರಮ ಸಡಗರವನ್ನು ನೋಡಿ ನನ್ನ ಶಾಲಾ ದಿನಗಳು ನೆನಪಿಗೆ ಬರುತ್ತವೆ ಎಂದ ಅವರು ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡಿ ನಮ್ಮಂತಹ ಕಲಾವಿದರನ್ನು ಪ್ರೋತ್ಸಾಹಿಸಿ ಎಂದು ವಿರಾಟ್ ಸಭೀಕರಲ್ಲಿ ಮನವಿ ಮಾಡಿದರು.
ತ್ಯಾಗರಾಜ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ.ಕೃಷ್ಣಾರೆಡ್ಡಿ ಮಾತನಾಡಿ, ಮಕ್ಕಳು ಶಾಲಾ ಹಂತದಲ್ಲಿ ಕಲಿಯುವ ಶಿಸ್ತು, ಶ್ರದ್ಧೆ ಮತ್ತು ಸಂಸ್ಕಾರವೇ ಮುಂದಿನ ಗುರಿ ತಲುಪಲು ದಿಕ್ಸೂಚಿಯಾಗಲಿದೆ. ಮಹಾನಗರಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಮಕ್ಕಳಿಗೂ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಸ್ಥೆ ಹತ್ತು ಹಲವು ಪ್ರಾಯೋಗಿಕ ಪಯತ್ನಗಳೊಂದಿಗೆ ಶ್ರಮಿಸುತ್ತಿದೆ. ಕೋವಿಡ್ನಿಂದ ೩ ವರ್ಷಗಳ ಕಾಲ ಶಾಲಾ ವಾರ್ಷಿಕೋತ್ಸವದ ಆಚರಣೆ ಸಾಧ್ಯವಾಗಲಿಲ್ಲ. ಇಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಭ್ರಮದ ದಿನವಾಗಿದೆ ಎಂದರು.
ಶಾಲೆಯ ಸಿಇಒ ಸಂದೀಪ್.ಸಿ.ಎಸ್, ಸಂಸ್ಥೆಯ ಖಜಾಂಚಿ ಸೋಮಶೇಖರ್ ರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ಸರ್ವೇಶ್, ಮ್ಯಾನೆಜಿಂಗ್ ಟ್ರಸ್ಟಿಗಳಾದ ಮಾಲತಿ ಕೃಷ್ಣಾರೆಡ್ಡಿ, ಚಿನ್ನಾಂಬೆ ಸದಾನಂದ, ಸುಬಾಷ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ದರ್ಶನ್. ಬಿ.ಎಸ್.ಶಿವಸ್ವಾಮಿ ಹಾಗೂ ಬೋದಕ ವೃಂದ ಹಾಜರಿದ್ದರು.