ರಾಮನಗರ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಕ ಹುದ್ದೆ ಕೊಡಿಸುವ ಸಂಬಂಧ ಲಂಚ ಪಡೆಯುತ್ತಿದ್ದ ಸಹಕಾರ ಸಂಘಗಳ ಉಪ ನಿಬಂಧಕರೊಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ರಾಮನಗರ ಸಹಕಾರ ಸಂಘಗಳ ಉಪನಿಬಂಧಕ ವೆಂಕಟೇಶ್ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಅಧಿಕಾರಿ. ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಖಾಲಿಯಿದ್ದ ಮುಖ್ಯ ಕಾರ್ಯ ನಿರ್ವಾಹಕ ಹುದ್ದೆಗೆ ಬಸವರಾಜು ಪುತ್ರ ಜಯಚಂದ್ರೇಗೌಡ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಹುದ್ದೆ ಕೊಡಿಸಲು ವೆಂಕಟೇಶ್ ರವರು 1 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದರು. ಇದಕ್ಕಾಗಿ ಮುಂಗಡವಾಗಿ 10 ಸಾವಿರ ರುಪಾಯಿ ಪಡೆದುಕೊಂಡಿದ್ದರು.
ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ಜಯಚಂದ್ರೇಗೌಡ ಹೆಸರನ್ನು ಶಿಫಾರಸ್ಸು ಮಾಡಿ ದೃಢೀಕರಿಸಲು ಸಹಕಾರ ಸಂಘಗಳ ಉಪನಿಬಂಧಕರಾಗಿದ್ದ ವೆಂಕಟೇಶ್ ಅವರು ಉಳಿಕೆ 90 ಸಾವಿರ ರುಪಾಯಿ ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಯಚಂದ್ರೇಗೌಡ ಅವರು ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ದೂರು ದಾಖಲಿಸಿದ್ದರು.
ರಾಮನಗರದ ರೇಲ್ವೆ ನಿಲ್ದಾಣದ ಆವರಣಕ್ಕೆ ಜಯಚಂದ್ರೇಗೌಡ ಅವರನ್ನು ಕರೆಸಿಕೊಂಡ ವೆಂಕಟೇಶ್ ಅವರು 90 ಸಾವಿರ ಲಂಚದ ಹಣ ಪಡೆಯುತ್ತಿದ್ದಾಗ ಅವರನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡರು. ಎಸಿಬಿ ಡಿವೈಎಸ್ಪಿ ಗೋಪಾಲ್ ಜೋಗಿನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಲಂಚಬಾಕ ಅಧಿಕಾರಿಯನ್ನು ಸೆರೆ ಹಿಡಿದ ಎಸಿಬಿ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಂದ ಪ್ರಸಂಶೆ ವ್ಯಕ್ತವಾಗಿದೆ.