ರಾಮನಗರ : ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಪ್ರವಾಸಿ ಜಾನಪದ ಲೋಕೋತ್ಸವ -2022 ಕಾರ್ಯಕ್ರಮವು ಮಾ.12 ಮತ್ತು 13ರಂದು ರಾಮನಗರದ ಜಾನಪದ ಲೋಕದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹೊರ ರಾಜ್ಯವಾದ ಕೇರಳದ ಪನಿಯಾ ನಿರ್ಧಮ ಮತ್ತು ಕಂಬಾಲನಟ್ಟಿ ನೃತ್ಯ, ಮಹಾರಾಷ್ಟ್ರದ ಸೋಂಗಿ ಮುಖವಟೆ, ತಮಿಳುನಾಡಿನ ಕರಗಂ ಮತ್ತು ಕಾವಡಿ, ಆಂಧ್ರಪ್ರದೇಶದ ವೀರನಾಟ್ಯಮ್ ಮತ್ತು ಗರಗಲು ಮಧ್ಯಪ್ರದೇಶದ ಬಧಾಯಿಯ ನೃತ್ಯ ಮತ್ತುತೆಲಂಗಾಣದ ಬೊನಾಲು ನೃತ್ಯದ ಜಾನಪದಕಲಾವಿದರು ಜಾನಪದ ಲೋಕಕ್ಕೆ ಬಂದು ಕಲಾಪ್ರದರ್ಶನ ನೀಡುತ್ತಿರುವುದು ವಿಶೇಷವಾಗಿದೆ.
ಈ ಉತ್ಸವದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳ ಕಲೆಗಳ ಪ್ರದರ್ಶನ ಇರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಮೂವತ್ತಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗವಹಿಸಲಿದ್ದು, ವೀರಗಾಸೆಕುಣಿತ, ಚಿಲಿಪಿಲಿಗೊಂಬೆ ನೃತ್ಯ, ಜಗ್ಗಲಿಗೆ ಮೇಳ, ನಂದಿ ಧ್ವಜಕುಣಿತ, ಪೂಜಾಕುಣಿತ, ಚಿಣ್ಣರಜನಪದ ನೃತ್ಯ, ಕಾಡುಗೊಲ್ಲರ ಕೊರವಂಜಿ ಕೋಲಾಟ, ಜೇನುಕುರುಬರ ಅಡಲೆ ಮರಕುಣಿತ, ಜೋಗತಿ ನೃತ್ಯ, ಹಗಲು ವೇಷ, ಕಣಿ ವಾದನ, ಬೇಡರ ವೇಷ, ಹೆಜ್ಜೆಕುಣಿತ ಕೋಲಾಟ, ಕರಗಕುಣಿತ, ತೊಗಲು ಗೊಂಬೆ ಕರಿಭಂಟನ ಕಾಳಗ, ಸಲಾಕೆ ಗೊಂಬೆ ಕುಣಿತ, ಪಟಾಕುಣಿತ, ತಮಟೆಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಹಾಡು ಮೇಳ, ಜನಪದ ನೃತ್ಯ, ಗಾಯನ ಇತ್ಯಾದಿ ಕಲೆಗಳು ಎಲ್ಲರ ಗಮನಸೆಳೆಯಲಿವೆ.
ಇಂಧನ ಹಾಗೂ ಕನ್ನಡ ಮತ್ತ ಸಂಸ್ಕೃತಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಾತಾ ಬಿ, ಮಂಜಮ್ಮಜೋಗತಿ ಪಾಲ್ಗೊಳ್ಳಲಿದ್ದು, ಸಂವಾದ ಕಾರ್ಯಕ್ರಮ ನಡೆಯಲಿದೆ. ಶ್ರೀ ಕೆರೆಮನೆ ಶಿವನಂದ ಹೆಗಡೆ, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಇವರಿಂದ ‘ಸುಭದ್ರಾಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ವಿಚಾರ ಸಂಕಿರಣ ಮತ್ತು ರಾಮನಗರ ಜಿಲ್ಲೆಯ ಜನಪದಕಲಾವಿದರು ಮತ್ತು ಚಿಕ್ಕಮಗಳೂರು ಜಿಲ್ಲಾ ಜನಪದ ಕಲಾ ಸಾಧಕರು ಎಂಬ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಮನಗರ ವತಿಯಿಂದ ಜಾನಪದ ಕಲಾವಿದರಿಗೆ ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಇದೇ ವೇಳೆ 2022ರ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ನಾಡೋಜ ಎಚ್.ಎಲ್. ನಾಗೇಗೌಡ – ಜಾನಪದ ಲೋಕಶ್ರೀ ಪ್ರಶಸ್ತಿ, ಕೆರೆಮನೆ ಶಿವಾನಂದ ಹೆಗಡೆ, ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ- ಡಾ. ಬಿ.ಎ.ವಿ.ವೇಕ ರೈ, ನಾಡೋಜಡಾ. ಜಿ. ನಾರಾಯಣ – ಜಾನಪದ ಲೋಕ ಪ್ರಶಸ್ತಿ ಡಾ. ಎಂ. ಬೈರೇಗೌಡ, ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ ಶ್ರೀಮತಿ ಪುಟ್ಟಲಕ್ಕಮ್ಮ ಅವರಿಗೆ ನೀಡಲಾಗುತ್ತದೆ.
ಸೋಬಾನೆ ಚಿಕ್ಕಮ್ಮ ಪ್ರಶಸ್ತಿ ಶ್ರೀಮತಿ ಹೊನ್ನೂರುಗೌರಮ್ಮ, ದೊಡ್ಡಮನೆ ಪ್ರಶಸ್ತಿ ಭೀಮಪ್ಪಯಲ್ಲಪ್ಪ ಪೂಜಾರ, ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ ಸುಭಾಷ್ಚಂದ್ರ ಹೊಸಮನಿ, ದೊಡ್ಡ ಆಲಹಳ್ಳಿ ಗೌರಮ್ಮಕೆಂಪೇಗೌಡ ಪ್ರಶಸ್ತಿ ಮಾಧುನಾಯ್ಕ, ಶ್ರೀಮತಿ ಕೆಂಪಮ್ಮ, ಚಿಕ್ಕಮರೀಗೌಡ, ಜಾನಪದ ಲೋಕ ಪ್ರಶಸ್ತಿ ದೊಂಬರ ಹುಚ್ಚಪ್ಪಕೊಟ್ಟ, ವಿ. ಈ. ಲೋಕೇಶ್, ಶರಣಮ್ಮ ಪಿ. ಸಜ್ಜನ, ಶ್ರೀಮತಿ ನ್ಯೂಸ್ಬಿ ಮತ್ತು ಶ್ರೀಮತಿ ಚಿಟ್ಟಿನ್ಬಿ, ಹನುಮಂತಗೌಡ ಬೊಮ್ಮುಗೌಡ ಬೆಳಂಬಾರ ಭೋಜ ಪೂಜಾರಿ, ಸೋಮವ್ವ ಲಮಾಣಿ, ಕೊಟ್ಗೆ ಹಾಲೇಶಪ್ಪ, ಸಿದ್ದೇಗೌಡ, ಹೊನ್ನಯ್ಯ, ಶಂಕರಪ್ಪರಾಮಪ್ಪ ಸಂಕಣ್ಣವರ, ಶ್ರೀಮತಿ ಕೇಶಿ ಗೋವಿಂದಗೌಡ, ನೀಲಪ್ಪಚೌದರಿ, ಬಿ.ಟಿ.ಮಾನವ, ಜಂಬಣ್ಣ ಶಂಕ್ರಪ್ಪ ಹಸಮಕಲ್, ರಂಗಯ್ಯ, ಲೋಕ ಸರಸ್ವತಿಗ್ರಂಥ ಪ್ರಶಸ್ತಿ, ನುಡಿಜಾನಪದ ಪ್ರೊ. ಬಾಲಕೃಷ್ಣ ಜಂಬಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದಾಗಿ ಅಧ್ಯಕ್ಷರಾದ ಟಿ. ತಿಮ್ಮೇಗೌಡಐ.ಎ.ಎಸ್(ನಿ) ಅವರು ತಿಳಿಸಿದ್ದಾರೆ.