News Karnataka Kannada
Friday, May 17 2024
ರಾಮನಗರ

ರಾಮನಗರ: ಸುಪಾರಿ ಕೊಟ್ಟು ಮಾವನನ್ನು ಕೊಲೆ ಮಾಡಿಸಿದ ಸೊಸೆ

Photo Credit : News Kannada

ರಾಮನಗರ : ಆಸ್ತಿ, ಹಣ ಮತ್ತು ವಡವೆ ಕೊಡಲಿಲ್ಲ ಎಂಬ ಕಾರಣಕ್ಕೆ ಸೊಸೆಯೇ ತನ್ನ ಮಾವನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಪ್ರಕರಣ ಬಿಡದಿ ಹೋಬಳಿ ಬಾನಂದೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಿಡದಿ ಹೋಬಳಿ ಬಾನಂದೂರು ಗ್ರಾಮದ ನಂದೀಶ್ ಅವರ ಪತ್ನಿ 25 ವರ್ಷದ ಚೈತ್ರ ಹಾಗೂ ಹಾರೋಹಳ್ಳಿ ಹೋಬಳಿಯ ಸೊಂಟೇನಹಳ್ಳಿ ಗ್ರಾಮದ 31 ವರ್ಷದ ನವೀನ್ ಎಂಬುವರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು. ಚೈತ್ರ ತನ್ನ ಮಾವ ಗಂಟಪ್ಪನನ್ನು ಹತ್ಯೆ ಮಾಡಲು ತನ್ನ ಪ್ರಿಯಕರ ನವೀನ್ ಜತೆ ಸೇರಿ ಒಳಸಂಚು ರೂಪಿಸಿ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಹಣವನ್ನು ಕೊಟ್ಟು ದುಷ್ಕರ್ಮಿಗಳಿಂದ ಕೃತ್ಯ ನಡೆಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಬಾನಂದೂರು ಗ್ರಾಮದ ಕಾಂಗ್ರೆಸ್ ಮುಖಂಡ ಗಂಟಪ್ಪ (56) ಎಂಬುವರನ್ನು ಫೆ.25 ರಂದು ರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಬಾನಂದೂರು-ಭೈರವನದೊಡ್ಡಿ ಮಾರ್ಗದಲ್ಲಿ ಗಂಟಪ್ಪ ಅವರಿಗೆ ಸೇರಿದ ತೋಟದಲ್ಲಿರುವ ಸರ್ವಿಸ್ ಸ್ಟೇಷನ್ ನಲ್ಲಿ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಹೊಟ್ಟೆ, ಕುತ್ತಿಗೆ ಭಾಗಕ್ಕೆ ಡ್ರ್ಯಾಗನ್ ನಿಂದ ಚುಚ್ಚಿ ಮತ್ತು ತಲೆಗೆ ಕಬ್ಬಿಣದ ರಾಡಿನಿಂದ ಬಲವಾಗಿ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಹಠಾತ್ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಗಂಟಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಈ ಸಂಬಂಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಆಸ್ತಿ ವಿಚಾರದಲ್ಲಿ ಕೃತ್ಯ ನಡೆದಿದೆ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿ ಬಂದಿದ್ದವು. ಅಲ್ಲದೇ ದುಷ್ಕರ್ಮಿಗಳ ಮೊಬೈಲ್ ಫೋನ್ ಲೊಕೇಶನ್ ಪರಿಶೀಲಿಸಿದಾಗ ಬಾನಂದೂರು, ಭೈರವನದೊಡ್ಡಿ ಗ್ರಾಮಗಳ ಪರಿಮಿತಿಯಲ್ಲಿ ಕರೆಗಳು ಹರಿದಾಡಿದ್ದವು. ಹೀಗಾಗಿ ಕೊಲೆಯಾದ ಗಂಟಪ್ಪ ಅವರ ಸಂಬಂಧಿಗಳಿಂದಲೇ ಕೃತ್ಯ ನಡೆದಿರುವ ಬಗ್ಗೆ ಪೊಲೀಸರಿಗೆ ಅನುಮಾನ ಗಟ್ಟಿಯಾಗಿತ್ತು.

ಮೃತ ಗಂಟಪ್ಪನವರ ಪುತ್ರ ನಂದೀಶ್ ಪ್ರೇಮ ವಿವಾಹವಾಗಿದ್ದ ಕಾರಣಕ್ಕೆ ಸೊಸೆಯನ್ನು ಮನೆಗೆ ಸೇರಿಸಿಕೊಳ್ಳದೆ ಹೊರ ಹಾಕಿದ್ದು, ಆಸ್ತಿ, ಹಣ ಹಾಗೂ ವಡವೆ ಕೊಡಲಿಲ್ಲವೆಂದು ಸೊಸೆ ಚೈತ್ರ ಕಡು ಕೋಪಗೊಂಡಿದ್ದಳು. ಅಂತಿಮವಾಗಿ ತನ್ನ ಮಾವನ ಕತೆ ಮುಗಿಸುವ ನಿರ್ಧಾರವನ್ನೂ ಮಾಡಿದ್ದಳು. ಹೀಗಾಗಿ ತನ್ನ ಪ್ರಿಯಕರ ನವೀನ್ ಜತೆ ಸೇರಿ ಸಂಚು ರೂಪಿಸಿ ತನ್ನ ಬಳಿಯಿದ್ದ ೩೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕೊಟ್ಟು ಸುಪಾರಿ ನೀಡಿದ್ದರು.

ಕಾಂಗ್ರೆಸ್ ಮುಖಂಡ ಗಂಟಪ್ಪ ಅವರ ಕೊಲೆ ಪ್ರಕರಣದ ತನಿಖೆಗೆ ಇಳಿದಿದ್ದ ಪೊಲೀಸರಿಗೆ ಆರೋಪಿ ಚೈತ್ರ ತನ್ನ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿರುವುದಾಗಿ ಹೇಳಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡದೆ ಇರುವುದು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಆರೋಪಿ ಚೈತ್ರಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತನ್ನ ಪ್ರಿಯಕರ ನವೀನ್ ಜೊತೆ ಸೇರಿ ಕೃತ್ಯ ಎಸಗಿರುವುದು ಬಯಲಾಗಿದೆ.

ಹಾರೋಹಳ್ಳಿ ಬಳಿಯ ಖಾಸಗಿ ಕಂಪೆಮಿ ಉದ್ಯೋಗಿ ಆಗಿರುವ ಆರೋಪಿ ನವೀನ್ ಮತ್ತು ಚೈತ್ರ ಇಬ್ಬರನ್ನು ಗುರುವಾರ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಆಯುಧಗಳು ಮತ್ತು ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಕೊಲೆ ಪ್ರಕರಣದಲ್ಲಿ ಇನ್ನು ಕೆಲವರು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕೊಲೆ ಪ್ರಕರಣ ಭೇದಿಸಿದ ಬಿಡದಿ ಠಾಣೆ ಸಿಪಿಐ ಪ್ರಕಾಶ್ ಮತ್ತು ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು