ಬೆಂಗಳೂರು,ಏ.15 : ಒಂಟಿಯಾಗಿ ವಾಸಿಸುತ್ತಿದ್ದ ನಿವೃತ್ತ ಯೋಧರೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆಂಧ್ರಪ್ರದೇಶದ ಐವರು ಸೋದರ ಸಂಬಂಧಿ ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಬು, ಮುರುಳಿ, ಗಜೇಂದ್ರ ನಾಯಕ್, ರಾಜೇಂದ್ರ ನಾಯಕ್ ಮತ್ತು ದೇವೇಂದ್ರ ನಾಯಕ್ ಬಂಧಿತ ಆರೋಪಿಗಳು. ಇವರೆಲ್ಲರೂ ಸೋದರ ಸಂಬಂಧಿಗಳು.
ಆರೋಪಿ ಬಾಬು ಮಣಿಪಾಲ್ ಆಸ್ಪತ್ರೆಯಲ್ಲಿ ಕೇರ್ ಟೇಕರ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶದ ಕುಪ್ಪಂ ಮೂಲದ ಐವರನ್ನು ದಸ್ತಗಿರಿ ಮಾಡಿ ಅವರಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು, ಒಂದು ಬೀಗ, ಒಂದು ಟವಲ್, ಮೃತರಿಗೆ ಸೇರಿದ ಆಪಲ್ಫೋನ್ ವಶಪಡಿಸಿಕೊಳ್ಳಲಾಗಿದೆ.
ದೊಮ್ಮಲೂರಿನ ಗೌತಮ್ ಕಾಲೋನಿಯಲ್ಲಿ ವಾಸವಿದ್ದ ಜ್ಯೂಡ್ ತೆಡ್ಡಾಸ್ ಅಲಿಯಾಸ್ ಸುರೇಶ್ ಎಂಬ ನಿವೃತ್ತ ಯೋಧರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ, ಶ್ವಾನದಳಕ್ಕೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಮನೆಯಲೆಲ್ಲ ಖಾರದಪುಡಿ ಎರಚಿ ಪರಾರಿಯಾಗಿದ್ದರು.
ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಲು ಇನ್ಸ್ಪೆಕ್ಟರ್ ಎಂ.ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತಾಂತ್ರಿಕ ಹಾಗೂ ವೈಜ್ಞಾನಿಕ ಮಾಹಿತಿಯ ಮೂಲಕ ಆರೋಪಿಗಳ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದೆ.
ನಿವೃತ್ತ ಯೋಧ ಸುರೇಶ್ ಅವರು, ಕುಟುಂಬದಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಕೇರ್ ಟೇಕರ್ ಕೆಲಸ ಮಾಡುತ್ತಿದ್ದ ಆರೋಪಿ ಬಾಬು ಸುರೇಶ್ಗೆ ಪರಿಚಿತನಾಗಿದ್ದ. ಬಾಬು ತನ್ನ ಸೋದರ ಸಂಬಂಧಿಗಳಾದ ನಾಲ್ವರ ಜೊತೆ ಸೇರಿಕೊಂಡು ಸುರೇಶ್ ಮನೆಯಲ್ಲಿರುವ ಹಣ ಮತ್ತು ಆಭರಣಗಳನ್ನು ದೋಚಲು ಯೋಜನೆಯೊಂದನ್ನು ರೂಪಿಸಿದ್ದ.
ಅದರಂತೆ ಮಂಗಳವಾರ ರಾತ್ರಿ 11 ಗಂಟೆ ಸಮಯದಲ್ಲಿ ಆರೋಪಿಗಳೆಲ್ಲರೂ ಸುರೇಶ್ರವರ ಮನೆಗೆ ಬಂದು ಅವರ ಬಾಯಿ, ಮೂಗು ಮುಚ್ಚಿ, ಕತ್ತು ಹಿಸುಕಿ, ತಲೆ ಮೇಲೆ ಬೀಗದಿಂದ ಹೊಡೆದು ಹತ್ಯೆ ಮಾಡಿ ನಂತರ ಹಣ ಮತ್ತು ಮೊಬೈಲ್ ಫೋನ್ನ್ನು ತೆಗೆದುಕೊಂಡು ಮನೆಯ ತುಂಬ ಖಾರದಪುಡಿ ಎರಚಿ ಪರಾರಿಯಾಗಿದ್ದರು.
ತಾಂತ್ರಿಕ ಮಾಹಿತಿಗಳು ಆರೋಪಿಗಳನ್ನು ಬಲೆ ಬೀಳಿಸಲು ಸಹಾಯ ಮಾಡಿವೆ. ಪೊಲೀಸರ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.