ರಾಮನಗರ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಅರಳೀಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮಂಗಳಗೌರಿ(29) ಕೊಲೆಯಾದ ಮಹಿಳೆ. ಈಕೆ ಕೌಟುಂಬಿಕ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿಕೊಂಡು ತನ್ನ ಅಕ್ಕನ ಮನೆ ಸೇರಿಕೊಂಡಿದ್ದಳು. ಇದರಿಂದ ಕೋಪಗೊಂಡ ಆಕೆಯ ಪತಿ ಸತೀಶ ಎಂಬಾತ ಈ ಕೃತ್ಯ ಎಸಗಿದವನು.
ಕ್ಷುಲ್ಲಕ ಕಾರಣಕ್ಕೆ ಪ್ರತಿದಿನವೂ ಗಂಡ ಹೆಂಡತಿ ಇಬ್ಬರ ನಡುವೆ ಸಂಘರ್ಷ ನಡೆಯುತ್ತಿದ್ದು ಇತ್ತೀಚಿಗೆ ಪತಿ ಪತ್ನಿಯ ನಡುವೆ ಮತ್ತೊಮ್ಮೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಬೇಸರಗೊಂಡ ಹೆಂಡತಿ ಅನುಮಾನಹಳ್ಳಿ ಗ್ರಾಮದಲ್ಲಿರುವ ತನ್ನ ಸಹೋದರಿ ಮನೆಗೆ ಬಂದಿದ್ದರು. ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆ ರಾತ್ರಿ ಕೆಲಸ ಮುಗಿಸಿಕೊಂಡು ವಾಪಸ್ ಅಕ್ಕನ ಮನೆಗೆ ತೆರಳುವಾಗ ಹಿಂಬಾಲಿಸಿದ ಪತಿ ಸತೀಶ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.