ರಾಮನಗರ: ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಎರಡನೇ ಸುತ್ತಿನ ಲಸಿಕಾ ಅಭಿಯಾನವು ಚುರುಕಾಗಿ ನಡೆದಿದೆ. ಪಶುಪಾಲನಾ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ರಾಸುಗಳಿಗೆ ಲಸಿಕೆ ನೀಡುತ್ತಿದ್ದಾರೆ.
ಇದೇ 8ರಂದು ಜಿಲ್ಲೆಯಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಈವರೆಗೆ 30 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ನೀಡಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.
ಕಳೆದ ವರ್ಷದ ನವೆಂಬರ್ನಲ್ಲಿ ಜಿಲ್ಲೆಯಲ್ಲಿ ಮೊದಲ ಸುತ್ತಿನ ಕಾಲುಬಾಯಿ ಲಸಿಕೆ ಕಾರ್ಯಕ್ರಮ ನಡೆದಿತ್ತು. ಈ ವರ್ಷ ಮೇ ಅಥವಾ ಜೂನ್ ತಿಂಗಳಲ್ಲೇ ಈ ಕಾರ್ಯಕ್ರಮ ಆರಂಭ ಆಗಬೇಕಿತ್ತು. ಆದರೆ, ಕೇಂದ್ರ ಸರ್ಕಾರದಿಂದ ಲಸಿಕೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ತಡವಾಗಿ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಡಿ. 7ರವರೆಗೆ ಈ ಅಭಿಯಾನ ನಡೆಯಲಿದೆ.
ಪಶುಪಾಲನಾ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 2,89,745 ದನ ಹಾಗೂ 19,968 ಎಮ್ಮೆಗಳಿವೆ. ಇವುಗಳಿಗೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲಾಗುತ್ತದೆ. ಮೂರುವರೆ ತಿಂಗಳು ಮೇಲ್ಪಟ್ಟ ಎಲ್ಲ ರಾಸುಗಳಿಗೆ ಈ ಲಸಿಕೆ ದೊರೆಯುತ್ತಿದೆ.
ತಂಡ ರಚನೆ: ಇಲಾಖೆ ಅಧಿಕಾರಿಗಳು 276 ಮಂದಿ ನೇತೃತ್ವದ ಒಟ್ಟು 38 ಲಸಿಕಾ ತಂಡಗಳನ್ನು ರಚನೆ ಮಾಡಿಕೊಂಡಿದ್ದಾರೆ. ಇದರಲ್ಲಿ ಪಶು ಸಂಗೋಪನೆ ಇಲಾಖೆಯಿಂದ 228 ಮಂದಿ, ಕೆಎಂಎಫ್ ಮೂಲಕ 48 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿ ತಂಡದಲ್ಲಿ ಮೇಲ್ವಿಚಾರಕರು, ಸಹಾಯಕರು ಸೇರಿ 7 ರಿಂದ 8 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲಾ ನಿತ್ಯ ಓಡಾಡಲು ಬಮೂಲ್ನಿಂದ ವಾಹನ ವ್ಯವಸ್ಥೆ ಮಾಡಿ
ಕೊಡಲಾಗಿದೆ.
ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಈ ಹಿಂದಿನ ವರ್ಷಗಳಲ್ಲಿ ನೂರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಈ ವರ್ಷ ಏಪ್ರಿಲ್ನಿಂದ ಅಕ್ಟೋಬರ್ ಅಂತ್ಯಕ್ಕೆ 56 ಗ್ರಾಮಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, 26 ರಾಸುಗಳು ಸಾವನ್ನಪ್ಪಿವೆ. ಹೀಗಾಗಿ ತ್ವರಿತಗತಿಯಲ್ಲಿ ಲಸಿಕೆ ಅಭಿಯಾನ ನಡೆದಿದೆ.
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣಾ ಕಾರ್ಯಕ್ರಮ (ಎನ್ಎಡಿಸಿಪಿ)ದಡಿ ಎರಡನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರ ಒಟ್ಟು 3,07,150 ಡೋಸ್ಗಳನ್ನು ಜಿಲ್ಲೆಗೆ ನೀಡಿದೆ.