ಹೊಸದಿಲ್ಲಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ಪೋಷಣ್ ಅಭಿಯಾನ ಬಲಪಡಿಸಲು ನ್ಯೂಟ್ರಿಶನ್ ಸ್ಮಾರ್ಟ್ ವಿಲೇಜ್ (ಪೌಷ್ಠಿಕಾಂಶ ಸ್ಮಾರ್ಟ್ ಗ್ರಾಮ) ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ.
ದೇಶದ 75 ಗ್ರಾಮಗಳನ್ನು ಕೃಷಿಯಲ್ಲಿ ಮಹಿಳೆಯರ ಕುರಿತ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಯ (ಎಐಸಿಆರ್ಪಿ-ಡಬ್ಲ್ಯುಐಎ) ಜಾಲದ ಮೂಲಕ ತಲುಪುದು ಇದರ ಮುಖ್ಯ ಉದ್ದೇಶ. ಈ ಯೋಜನೆಯು ಭುವನೇಶ್ವರದ ಸಂಸ್ಥೆಯೊಂದಿಗೆ ಸಮನ್ವಯಗೊಂಡ 12 ರಾಜ್ಯಗಳ 13 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಸಂಸ್ಥೆಗಳು, ಶಿಕ್ಷಣ ತಜ್ಞರು, ಕೃಷಿ ವಿಜ್ಞಾನಿಗಳು 75 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಬದಲಾವಣೆಯನ್ನು ತರಲು ಪ್ರಧಾನಿಯವರು ನೀಡಿದ ಕರೆಗೆ ಈ ಉಪಕ್ರಮವು ಅನುಗುಣವಾಗಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಠಿಕತೆಯನ್ನು ಪರಿಹರಿಸಲು ಸ್ಥಳೀಯ ಪಾಕಪದ್ಧತಿಯ ಮೂಲಕ ಸಾಂಪ್ರದಾಯಿಕ ಜ್ಞಾನವನ್ನು ಬಳಸಿಕೊಳ್ಳುವುದು; ಕೃಷಿಯಲ್ಲಿ ತೊಡಗಿರುವ ಮಹಿಳೆಯರು ಮತ್ತು ಶಾಲಾ ಮಕ್ಕಳನ್ನು ದೇಶೀಯ ಕೃಷಿ ಹಾಗೂ ಮತ್ತು ಪೌಷ್ಠಿಕ ತೋಟಗಳ ಮೂಲಕ ಪೌಷ್ಠಿಕಾಂಶ-ಸಂಬಂಧಿತ ಕೃಷಿಯನ್ನು ಅನುಷ್ಠಾನಿಸಲು ತೊಡಗಿಸಿಕೊಳ್ಳುವುದು ಈ ನ್ಯೂಟ್ರಿಶನ್ ಸ್ಮಾರ್ಟ್ ಗ್ರಾಮ ಕಾರ್ಯಕ್ರಮದ ಉದ್ದೇಶವಾಗಿದೆ.
ಜೊತೆಗೆ ಅಪೌಷ್ಠಿಕತೆ ಮುಕ್ತ ಗ್ರಾಮಗಳ ಗುರಿ ಸಾಧಿಸಲು, ಪೌಷ್ಠಿಕಾಂಶ ಅಭಿಯಾನವನ್ನು ಬಲಪಡಿಸಲು, ನ್ಯೂಟ್ರಿಶನ್ ವಿಲೇಜ್ / ನ್ಯೂಟ್ರಿ ಫುಡ್ / ನ್ಯೂಟ್ರಿ ಡಯಟ್ / ನ್ಯೂಟ್ರಿ ಥಾಲಿ ಇತ್ಯಾದಿ ಪರಿಕಲ್ಪನೆಯನ್ನು ಒತ್ತಿ ಹೇಳಲು ಬೃಹತ್ ಜಾಗೃತಿ ಅಭಿಯಾನಗಳು ಮತ್ತು ಕ್ಷೇತ್ರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೇ ಸಮಾಜದ ಎಲ್ಲ ರಂಗಗಳಲ್ಲಿ ಮಹಿಳಾ ರೈತರ ಕಾನೂನು ಹಕ್ಕುಗಳ ಬಗ್ಗೆಯೂ ಅವರಿಗೆ ಅರಿವು ಮೂಡಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಕೈಲಾಶ್ ಚೌಧರಿ ಮತ್ತು ಶೋಭಾ ಕರಂದ್ಲಾಜೆ, ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್, ಡಿಎಆರ್ಇ ಕಾರ್ಯದರ್ಶಿ ಡಾ. ತ್ರಿಲೋಚನ್ ಮಹಾಪಾತ್ರ ಇದ್ದರು.