ಕನಕಪುರ: ಸರ್ಕಾರ ಸರ್ವೆ ನಡೆಸಿ ಕೊರೊನಾದಿಂದ ಮೃತಪಟ್ಟವರನ್ನು ಪತ್ತೆ ಹಚ್ಚಿ ಅವರ ಕುಟುಂಬಕ್ಕೆ ಪರಿಹಾರ ವಿತರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸರ್ಕಾರ ಸಾರ್ವಜನಿಕರಿಗೆ ನೀಡಿರುವ ಗಿಫ್ಟ್ ಆಗಿದ್ದು ಕೊರೊನಾದಿಂದ ಸಾವನ್ನಪ್ಪಿರುವವರು ರಾಜ್ಯದಲ್ಲಿ ಹೆಚ್ಚಿದ್ದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ದೂರಿದರಲ್ಲದೆ, ಅಧಿಕಾರಿಗಳು, ಪಿಡಿಒಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮನೆಮನೆಗೆ ತೆರಳಿ ಸರ್ವೆ ನಡೆಸುವಂತೆ ಆದೇಶ ನೀಡಿ ಮುಖ್ಯಮಂತ್ರಿಗಳು ಮುಂದಾಳತ್ವ ವಹಿಸಿ ಹೆಚ್ಚು ಪರಿಹಾರ ವಿತರಿಸಲಿ ಎಂದು ಸಲಹೆ ನೀಡಿದರು.
ರಾಗಿ ಮತ್ತು ತೊಗರಿ ಜೋಳ ಖರೀದಿ ಕೇವಲ 20 ಕ್ವಿಂಟಾಲ್ ಗೆ ನಿಲ್ಲಿಸಿರುವುದು ಸರಿಯಲ್ಲ. ಕಳೆದ ಎರಡು ವರ್ಷಗಳ ಹಿಂದೆ ಯಾವ ಮಾನದಂಡವನ್ನು ಅನುಸರಿಸಿ ಖರೀದಿಮಾಡಿ ಬೆಂಬಲ ಬೆಲೆ ನೀಡುತ್ತಿದ್ದರೋ ಅದೇ ಮಾನದಂಡವನ್ನು ಮಾಡಿ ರೈತರಿಗೆ ನೆರವಾಗಿ ಕೋವಿಡ್ ನಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ ಎಂದು ಹೇಳಿದರು.
ಸಂಸದ ಡಿ.ಕೆ.ಸುರೇಶ್ ಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಧ್ಯಕ್ಕೆ ಅದು ಚರ್ಚೆಯಲ್ಲಿಲ್ಲ. ಮುಂದೆ ರಾಜ್ಯ ರಾಜಕಾರಣ ಯಾವ ರೀತಿ ಸಾಗುತ್ತದೆಯೋ ಅದನ್ನು ನೋಡಿಕೊಂಡು ತೀರ್ಮಾನಿಸಲಾಗುವುದು. ಅದೀಗ ಅಪ್ರಸ್ತುತ ಎಂದು ಹೇಳಿದರು.