ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸಂಬಂಧಿಸಿದ ಕಾವೇರಿ ನೀರಾವರಿ ನಿಗಮದಿಂದ 2019-20ನೇ ಸಾಲಿನಲ್ಲಿ ಅನುಮೋದನೆ ಪಡೆದು ನಂತರ ಕೈಬಿಟ್ಟಿದ್ದ ಕಾಮಗಾರಿಗಳನ್ನು 2021-22ನೇ ಸಾಲಿನಲ್ಲಿ ಕೈಗೊಳ್ಳುವ ಪಟ್ಟಿಯಲ್ಲಿ ಸೇರಿಸಿಕೊಳ್ಳುವಂತೆ ರಾಜ್ಯ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಕೆಲವು ನೀರಾವರಿ ಯೋಜನೆಗಳನ್ನು ರಾಜ್ಯ ಸರ್ಕಾರ ಕಳೆದ ಸಾಲಿನಲ್ಲಿ ಕೈಬಿಟ್ಟಿದ್ದ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರನ್ನು ಇತ್ತೀಚೆಗೆ ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ್ದೇನೆ. ಕಾವೇರಿ ನೀರಾವರಿ ನಿಗಮದಿಂದ 2019-20ನೇ ಸಾಲಿನಲ್ಲಿ ಅನುಮೋದನೆ ಪಡೆದು ನಂತರ ಕೈಬಿಟ್ಟಿದ್ದ ಕಾಮಗಾರಿಗಳನ್ನು 2021-22ನೇ ಸಾಲಿನಲ್ಲಿ ಕೈಗೊಳ್ಳಲು ಪಟ್ಟಿಯಲ್ಲಿ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾಗಿ ಹೇಳಿದರು.
ಕಾವೇರಿ, ಶಿಂಷಾ ನದಿ ಹಾಗೂ ಹೇಮಾವತಿ ಜಲಾಶಯದ ಉದ್ದೇಶಿತ ಕುಡಿಯುವ ನೀರಿನ ಪ್ರಮುಖ ಯೋಜನೆಗಳು ಹಾಗೂ ಕೆರೆಗಳನ್ನು ತುಂಬಿಸುವ ಕೆಲವು ಯೋಜನೆಗಳು ಅನುಮೋದನೆ ಪಡೆದು ನೆನೆಗುದಿಗೆ ಬಿದ್ದಿವೆ. ಹೀಗಾಗಿ 2021-22ರ ಯೋಜನಾ ಪಟ್ಟಿಯಲ್ಲಿ ಅವೆಲ್ಲವನ್ನೂ ಸೇರ್ಪಡೆ ಮಾಡಿಕೊಂಡು ಅದಕ್ಕೆ ಮರುಜೀವ ಕೊಡುವಂತೆ ಗಮನ ಸೆಳೆಯಲಾಗಿದೆ. ತಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹೊಸ ಪಟ್ಟಿಗೆ ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಈ ವೇಳೆ ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ಇದ್ದರು ಎಂದು ಡಿ.ಕೆ.ಸುರೇಶ್ ತಿಳಿಸಿದರು.