ಬೆಂಗಳೂರು: ಬಾಂಗ್ಲಾದೇಶದ ಇಬ್ಬರು ಮಾನವ ಸಾಗಾಣೆ ಪ್ರಕರಣ ತಲೆಮರೆಸಿಕೊಂಡಿದ್ದರು. ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅವರನ್ನು ವಶಕ್ಕೆ ಪಡೆದಿದ್ದಾರೆ. ಈಗ ಒಟ್ಟು ಬಂಧಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿರುವುದು ಗಮನಾರ್ಹವಾಗಿದೆ.
ಈ ಹಿಂದೆ ಕೇಂದ್ರೀಯ ಭಯೋತ್ಪಾದನಾ ನಿಗ್ರಹ ಸಂಸ್ಥೆ ನಡೆಸಿದ ಬೃಹತ್ ಶೋಧದ ನಂತರ ಪರಾರಿಯಾಗಿದ್ದ ಮೊಹಮ್ಮದ್ ಸಜ್ಜಿದ್ ಹಲ್ದಾರ್ ಮತ್ತು ಇದ್ರಿಸ್ ಅವರನ್ನು ಕರ್ನಾಟಕದಲ್ಲಿ ಬಂಧಿಸಲಾಗಿದೆ ಎಂದು ಎನ್ಐಎ ಶುಕ್ರವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಪರಾರಿಯಾಗಿದ್ದ ಈ ಇಬ್ಬರನ್ನು ಕರ್ನಾಟಕ ಪೊಲೀಸರ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಸಹಾಯದಿಂದ ಗುರುವಾರ ರಾತ್ರಿ ಬಂಧಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
2023ರ ನವೆಂಬರ್ನಲ್ಲಿ ಎನ್ಐಎ ಈ ದಂಧೆಯನ್ನು ಭೇದಿಸಿತ್ತು. ಕರ್ನಾಟಕ ಮೂಲದ ಕೆಲವು ವ್ಯಕ್ತಿಗಳು ಅಸ್ಸಾಂ, ತ್ರಿಪುರಾ ಮತ್ತು ಗಡಿಯಾಚೆಗಿನ ದೇಶಗಳಲ್ಲಿ ಮಾನವ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ನಂತರ ಕಳೆದ ವರ್ಷ ನವೆಂಬರ್ 7ರಂದು ಎನ್ಐಎ ಪ್ರಕರಣವನ್ನು ದಾಖಲಿಸಿತ್ತು. ಆದರೆ ಪ್ರಕರಣದ ತನಿಖೆ ವೇಳೆ ಹಲ್ದಾರ್ ಮತ್ತು ಇದ್ರಿಸ್ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬೆನಾಪೋಲ್ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು.
ಹಾಗೂ ತಮ್ಮದೆ ಆದ ಕಾರ್ಯಚರಣೆ ನಿರ್ಮಿಸಿಕೊಂಡಿದ್ದರು. ಹಲ್ದಾರ್ ಅವರು ಬೆಂಗಳೂರಿನ ರಾಮಮೂರ್ತಿ ನಗರದ ಕೆ ಚನ್ನಸಂದ್ರದಲ್ಲಿ ಹಲ್ದಾರ್ ತ್ಯಾಜ್ಯ ಸಂಗ್ರಹಣೆ ಮತ್ತು ವಿಂಗಡನೆ ಘಟಕವನ್ನು ಸ್ಥಾಪಿಸಿದ್ದರು ಅಲ್ಲದೆ ಇತರ ಬಾಂಗ್ಲಾದೇಶಿ ಪ್ರಜೆಗಳಿಗೆ ಉದ್ಯೋಗ ನೀಡಿದ್ದರು. ಇದ್ರಿಸ್ ಅವರು ನಗರದ ಆನಂದಪುರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಂಗಡನೆ ಘಟಕವನ್ನು ಸ್ಥಾಪಿಸಿದ್ದರು. ಅಲ್ಲಿ ಆತ ಭೂಮಿಯನ್ನು ಗುತ್ತಿಗೆಗೆ ಪಡೆದು 20ಕ್ಕೂ ಹೆಚ್ಚು ಬಾಂಗ್ಲಾದೇಶಿ ಕುಟುಂಬಗಳಿಗೆ ಟೆಂಟ್ ಹಾಕಿದ್ದರು. ಬಳಿಕ ಅವರನ್ನು ಆತ ಅಲ್ಲಿಂದ ಕಳ್ಳಸಾಗಣೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ತನಿಖೆ ಮುಂದುವರೆದಿದೆ. ಇಂಡೋ-ಬಾಂಗ್ಲಾದೇಶ ಗಡಿಯ ಮೂಲಕ ಭಾರತಕ್ಕೆ ವ್ಯಕ್ತಿಗಳನ್ನು ಕಳ್ಳಸಾಗಣೆ ಮಾಡುವುದು ಮತ್ತು ಆರೋಪಿಗಳು ಸಂತ್ರಸ್ತರಿಗೆ ನಕಲಿ ಆಧಾರ್ ಕಾರ್ಡ್ಗಳನ್ನು ತಯಾರಿಸುವಲ್ಲಿ ಮತ್ತು ಒದಗಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಐಎ ಹೇಳಿದೆ.
ಈ ಹಿಂದೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ (ಯುಎಪಿಎ) 1967 ರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ 12 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿ, ಚಾರ್ಜ್ಶೀಟ್ ಹಾಕಲಾಗಿತ್ತು. ಇದೀಗ ಸಂಸ್ಥೆಯು ಇಂಡೋ-ಬಾಂಗ್ಲಾದೇಶ ಗಡಿಯಾದ್ಯಂತ ಸಕ್ರಿಯವಾಗಿರುವ ಮಾನವ ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮವನ್ನು ಮುಂದುವರೆಸಿದೆ.