ಮಂಗಳೂರು: ಮಂಗಳೂರಿನ ಖಾಸಗಿ ಯುನಿವರ್ಸಿಟಿಯಲ್ಲಿ ಪಿಹೆಚ್ಡಿ ಅಧ್ಯಯನ ಮಾಡುತ್ತಿದ್ದ ಪುತ್ತೂರು ಮೂಲದ ಯುವತಿ ನಾಪತ್ತೆಯಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ದಾಖಲಾಗಿ ಆರು ದಿನಗಳಾಗಿದ್ದರೂ ಯುವತಿಯ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಉಳ್ಳಾಲ ತಾಲೂಕಿನ ಕೋಟೆಕಾರು ಬಳಿಯ ಮಾಡೂರಿನ ಪಿಜಿಯೊಂದರಲ್ಲಿದ್ದ ಚೈತ್ರಾ ಹೆಬ್ಬಾರ್ ತನ್ನ ಸ್ನೇಹಿತೆಯ ಜೊತೆ ವಾಸವಾಗಿದ್ದಳು. ಕಳೆದ ಫೆ.17 ರಂದು ಬೆಳಗ್ಗೆ 9 ಗಂಟೆಗೆ ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾ ಕದ್ರಿಯ ದೊಡ್ಡಪ್ಪನ ಮನೆಗೂ ತೆರಳದೆ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾಳೆ.
ತಂದೆ ಮೃತ ಪಟ್ಟಿದ್ದ ಹಿನ್ನಲೆಯಲ್ಲಿ ದೊಡ್ಡಪ್ಪನ ಮನೆಯಲ್ಲೇ ಇದ್ದು ವ್ಯಾಸಂಗ ಮಾಡಿದ್ದ ಚೈತ್ರ ಎಂಎಸ್ಸಿಯನ್ನು ಮನೆಯಿಂದಲೇ ಮಾಡಿದ್ದಳು. ಪಿಹೆಚ್ಡಿ ಮಾಡುವ ಸಲುವಾಗಿ ಪಿಜಿ ಸೇರಿಕೊಂಡಿದ್ದ ಚೈತ್ರ ಇದೀಗ ನಾಪತ್ತೆಯಾಗಿದ್ದಾರೆ. ಚೈತ್ರಾ ನಾಪತ್ತೆಯ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಡ್ರಗ್ ಮಾಫಿಯಾ ಕೈವಾಡದ ಶಂಕೆ ವ್ಯಕ್ತವಾಗಿದೆ.
ಮಾಡರು ಬಜರಂಗದಳದ ಮುಖಂಡ ಅರ್ಜುನ್ ಮಾಡೂರು ಚೈತ್ರಾಳಿಗೆ ಇಂತಹ ವ್ಯಕ್ತಿಗಳ ಜೊತೆ ಸಂಪರ್ಕ ಇರುವುದಾಗಿ ಚೈತ್ರಾಳ ದೊಡ್ಡಪ್ಪನ ಗಮನಕ್ಕೆ ತಂದಿದ್ದರು. ಈ ಬೆಳವಣಿಗೆಯ ಬಳಿಕ ಚೈತ್ರ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.