ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ವಿವಾದದ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಕಾಟೇರ ಚಿತ್ರದ ಮೂಲಕ ಬಹು ದಿನಗಳ ಬಳಿಕ ಗೆಲುವಿನ ರುಚಿ ಕಂಡ ದರ್ಶನ್ ನಿರ್ಮಾಪಕ ಉಮಾಪತಿ ವಿರುದ್ಧ ಇದೇ ಚಿತ್ರದ ಟೈಟಲ್ ವಿಚಾರವಾಗಿ ಮಾತಾನಾಡಿ ವಿವಾದ ಮಾಡಿಕೊಂಡಿದ್ದಾರೆ.
ಈ ವಿವಾದದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ಗೌಡತಿಯರ ಸೇನೆ ದೂರನ್ನು ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೆ ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ʼಡಿ ಪರ್ವʼ ಕಾರ್ಯಕ್ರಮದಲ್ಲಿ ದರ್ಶನ್ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗೌಡತಿಯರ ಸೇನೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಪತ್ರದಲ್ಲಿ ʼಯುವ ಜನರಿಗೆ ಮಾದರಿ ಆಗಬೇಕಿದ್ದ ಒಬ್ಬ ನಾಯಕ ನಟ ಅಸಹಜ ಹೇಳಿಕೆಗಳನ್ನು ಕೊಡುತ್ತಿರುವುದು. 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಭಾವನೆಯಿಂದ ಒಬ್ಬಳು ಹೋಗುತ್ತಾಳೆ ಒಬ್ಬಳು ಬರುತ್ತಾಳೆ ಅವಳ ಅಜ್ಜಿನಾ… ಎಂದು ಉಡಾಫೆಯಾಗಿ ಮಾತನಾಡಿರುತ್ತಾರೆ. ಈ ಸಭೆಯಲ್ಲಿ ಆದಿಚುಂಚನಗಿರಿ ಗುರುಗಳು, ಸಂಸದೆ ಸುಮಲತಾ, ಹಲವಾರು ಗಣ್ಯಾತಿಗಣ್ಯರು, ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಅಲ್ಲದೇ ʼಸಮಾಜಕ್ಕೆ ಮಾದರಿ ಆಗಬೇಕಾದ ನಟನೊಬ್ಬ ಸಾರ್ವಜನಿಕವಾಗಿ ಹೀಗೆ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಿಚಾರಣೆ ನಡೆಸಿ, ಆತ ಉಪಯೋಗಿಸಿರುವ ಪದಗಳು ಯಾವ ಭಾವನೆಯಿಂದ ಹೇಳಿದ್ದಾರೆಂದು ವಿವರಣೆ ಕೇಳಬೇಕಾಗಿ ವಿನಂತಿ. ಈ ಹಿಂದೆಯೂ ಈ ನಟ ಹೆಂಡತಿಗೆ ಸಿಗರೇಟ್ನಿಂದ ಸುಟ್ಟು ಮಾನಸಿಕವಾಗಿ ಕಿರುಕುಳ ಕೊಟ್ಟು ಜೈಲು ಪಾಲಾಗಿದ್ದು ಇತಿಹಾಸ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆ ಬಿಚ್ಚಿ ರೂಮಿನಲ್ಲಿ ಕೂಡಿಹಾಕಿ ಎಂಬ ಹೇಳಿಕೆ ನೀಡಿ ಹೆಣ್ಣು ಮಕ್ಕಳು ಮುಜುಗರಗೊಳ್ಳುವಂತೆ ಮಾಡಿರುತ್ತಾನೆ. ಮಾದರಿ ನಾಯಕ ಯುವ ಜನತೆಗೆ ನೀಡುತ್ತಿರುವ ಸಂದೇಶ ಏನು ಎನ್ನುವುದರ ಸ್ಪಷ್ಟನೆ ನೀಡಿ ಕ್ಷಮೆ ಕೇಳಬೇಕು’ ಎಂದೂ ಸಹ ಗೌಡತಿಯರ ಸೇನೆ ಪತ್ರದ ಮೂಲಕ ಆಗ್ರಹಿಸಿದೆ.