ಬೆಂಗಳೂರು: ಕನ್ನಡ ನಾಡಿನ ರೈತರಿಗೆ ಅನ್ಯಾಯವಾದರೆ ರಾಜಣ್ಣ, ಅಂಬರೀಶ್, ವಿಷ್ಣುವರ್ಧನ್ ಬರುತ್ತಿದ್ದರು. ಇಂದು ಕಾವೇರಿ ಹೋರಾಟಕ್ಕೆ ಸ್ಯಾಂಡಲ್ವುಡ್ ನಟರು ಬರಬೇಕು ಎಂದು ಕನ್ನಡಿಗರ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಅಲ್ಲದೆ ಸುದೀಪ್, ಶಿವಣ್ಣ, ದರ್ಶನ್, ಯಶ್ ಅವರ ಫೋಟೊಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ರಕ್ಷಣಾ ವೇದಿಕೆಯ ಕನ್ನಡ ಪ್ರಕಾಶ್ ಅವರು, ಕನ್ನಡ ಚಲನಚಿತ್ರ ನಟರೇ ಯಾಕೆ ಈ ಮೌನ? ನಿಮಗೆ ಕಾವೇರಿ ನೀರನ ಬಗ್ಗೆ ಕಾಳಜಿ ಇಲ್ಲವೇ? ನೀವು ಕಾವೇರಿ ನೀರು ಕುಡಿಯುವುದಿಲ್ಲವೇ? ನಿಮ್ಮ ಮೈಯಲ್ಲಿ ಕನ್ನಡದ ರಕ್ತ ಹರಿಯುತ್ತಿಲ್ಲವೇ? ನಿಮ್ಮ ಸ್ವಾಭಿಮಾನ ಸತ್ತು ಹೋಗಿದೆಯೇ? ನಿಮಗೆ ನಿಮ್ಮ ಪ್ಯಾನ್ ಇಂಡಿಯಾ ಚಿತ್ರಗಳೇ ಮುಖ್ಯವೇ? ಸಾಕು ಮಾಡಿ ನಿಮ್ಮ ಗುಲಾಮಗಿರಿತನ ನಿಮ್ಮನ್ನು ಬೆಳೆಸಿರುವುದು ಕಾವೇರಿ ನೀರು ಕುಡಿದು ಬೆಳೆದ ಕನ್ನಡಿಗರು ಎನ್ನುವುದನ್ನು ಮರೆಯಬೇಡಿ ಕಿಂಚಿತ್ತಾದರೂ ಸ್ವಾಭಿಮಾನ ತೋರಿಸಿ ಕಾವೇರಿಯ ಕುರಿತು ಧ್ವನಿ ಎತ್ತಿ ಎಂದು ಆಗ್ರಹಿಸಿದ್ದಾರೆ.
ಕನ್ನಡ ನಾಡಿನ ರೈತರಿಗೆ ಅನ್ಯಾಯವಾದಾಗ ಮುನ್ನುಗ್ಗಿ ಬರುವಂಥ ಶಕ್ತಿ… ಕನ್ನಡ ಚಲನಚಿತ್ರ ರಂಗದಲ್ಲಿ ಡಾಕ್ಟರ್ ರಾಜಣ್ಣ ಮಂಡ್ಯದ ಗಂಡು ಅಂಬರೀಶ್. ವಿಷ್ಣುವರ್ಧನ್ ನವರಿಗೆ ಮಾತ್ರ ಇತ್ತು… ಇಂದು ಅವರ ಕೂಗಿಲ್ಲದೆ ಎಷ್ಟೋ ರೈತರು ಹಾಗೂ ಕನ್ನಡದ ಮಕ್ಕಳು ಪರಭಾಶಿಗರ ಒತ್ತಡಕ್ಕೆ ಸಿಲುಕಿ ನಮ್ಮ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಟರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.