ಬೆಂಗಳೂರು: ರಾಜ್ಯದಲ್ಲಿ ಬರಗಾಲದಿಂದ ನೀರಿನ ಹಾಹಾಕಾರ ಎದುರಾಗಿದೆ ಆದರೆ ಸರ್ಕಾರ ಜನರಿಗೆ ನೀರು ಪೂರೈಕೆ ಮಾಡುವಲ್ಲಿ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಇದೇ ಸಮಯದಲ್ಲಿ ಎಲ್ಲೆಂದರಲ್ಲಿ ಮದ್ಯ ಸಿಗುವಂತೆ ಮಾಡುವ ಮೂಲಕ ‘ಮದ್ಯ ಖಾತ್ರಿ ಸರ್ಕಾರ’ ಎಂಬ ಕುಖ್ಯಾತಿ ಪಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಸರಣಿಯಾಗಿ ಪೋಸ್ಟ್ ಮಾಡಿದ್ದು ಪಂಚಾಯಿತಿ ಮಟ್ಟದಲ್ಲಿ ಹೊಸ ವೈನ್ಶಾಪ್ಗಳನ್ನು ತೆರೆಯುವ ನಿರ್ಧಾರವು ರಾಜ್ಯ ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ.
‘ಒಂದೆಡೆ ಗ್ಯಾರಂಟಿ ಹೆಸರಿನಲ್ಲಿ ಪ್ರತಿ ಮಹಿಳೆಗೆ 2 ಸಾವಿರ ರೂ.ಗಳನ್ನು ನೀಡುತ್ತಿರುವ ಸರಕಾರ, ಮತ್ತೊಂದೆಡೆ ಆ ಹಣವನ್ನು ವೈನ್ ಶಾಪ್ ಮೂಲಕ ಪತಿಯಿಂದ ಕಸಿದುಕೊಳ್ಳಲು ಸರಕಾರ ಹೊಸ ಮಾರ್ಗ ಕಂಡುಕೊಂಡಿದೆ. ‘ಮಹಿಳೆಯರಿಗೆ ನೀಡುವ ಹಣವನ್ನು ಗಂಡನ ಮೂಲಕ ಪಡೆಯುವ ಮನಿ ರಿಟರ್ನ್ ಪಾಲಿಸಿಯಂತೆ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಅಬಕಾರಿ ಇಲಾಖೆ ಹೇಳಿಕೆ ನೋಡಿ ತಮಾಷೆಯಾಗಿತ್ತು. ಅಕ್ರಮ ದಂಧೆಯನ್ನು ತಡೆಯುವಲ್ಲಿ ಸಂಬಂಧಪಟ್ಟವರು ವಿಫಲರಾಗಿದ್ದಾರೆ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.