ಬೆಂಗಳೂರು: ಕಾಫಿ ಬೆಳೆಗಾರರಿಗೆ ಡಬ್ಬಲ್ ಶಾಕ್ ಸಿಕ್ಕಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾಫಿ ಬೆಲೆ ಕಡಿಮೆಯಾದರೆ ಇನ್ನೊಂದೆಡೆ ಮಳೆ ಬಾರದೆ ಬರಗಾಲದ ಪರಿಸ್ಥಿತಿ ಉಂಟಾಗಿದ್ದು ಅದರ ಮಧ್ಯೆ ಈ ಬೆಲೆ ಕುಸಿತ ಕಾಫಿ ಬೆಳೆಗಾರನ ಮುಖದಲ್ಲಿನ ಮಂದಹಾಸವನ್ನು ಮಾಯಾ ಮಾಡಿದಂತಾಗಿದೆ.
ಬ್ರಜಿಲ್, ವಿಯೆಟ್ನಾಂ ಮತ್ತು ಇಂಡೋನೇಷ್ಯಾದಲ್ಲಿ ಈ ವರ್ಷ ಬಂಪರ್ ಕಾಫಿ ಬೆಳೆ ಬಂದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಕಾಫಿ ರಫ್ತಿನಲ್ಲಿ ಭಾರತ ವಿಶ್ವದ 7ನೇ ದೇಶವಾಗಿದೆ. ಭಾರತದ ಶೇ. 70ರಷ್ಟು ಕಾಫಿ ಕರ್ನಾಟಕದ ರಾಜ್ಯದ ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಬೆಳೆಯುತ್ತದೆ. ಈ ವರ್ಷ ಮಳೆ ಅಭಾವದಿಂದ ದೇಶದಲ್ಲಿ ಶೇ. 30ರಷ್ಟು ಕಾಫಿ ಇಳುವರಿ ಕಡಿಮೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ.
ಭಾರತದಲ್ಲಿ ವರ್ಷಕ್ಕೆ 3.5 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಆಗುತ್ತದೆ. ಈ ವರ್ಷ 3.74 ಲಕ್ಷ ಮೆಟ್ರಿಕ್ ಟನ್ ಕಾಫಿ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಕಾಫಿ ಇಳುವರಿ 3 ಲಕ್ಷ ಟನ್ಗಿಂತ ಕಡಿಮೆ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಫಿ ಬೆಳೆಯುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಕೂಲಿಗಳ ಲಭ್ಯತೆ, ರಸಗೊಬ್ಬರ ಬೆಲೆ ಹೆಚ್ಚಳ ಹೀಗೆ ಸಾಕಷ್ಟು ವೆಚ್ಚವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಕಾಫಿ ಇಳುವರಿಯೂ ಕಡಿಮೆ ಆಗಿದೆ. ಈ ಗಾಯದ ಮೇಲೆ ಬರೆ ಎಳೆದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆಯೂ ಕಡಿಮೆ ಆಗಿದ್ದು ಎಂದು ಕಾಫಿ ಬೆಳೆಗಾರರು ಪರಿತಪಿಸುತ್ತಿದ್ದಾರೆ.