ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ನಿಗಮ ಮಂಡಳಿ ನೇಮಕಾತಿಗೆ ನ.18 ಮತ್ತು 19ರಂದು ನಡೆಯುವ 2ನೇ ಹಂತದ ಸ್ಪರ್ಧಾತ್ಮಕ ಪರೀಕ್ಷೆಗೆ ವಸ್ತ್ರ ಸಂಹಿತೆ ಬಿಡುಗಡೆ ಮಾಡಿದ್ದು, ಹಿಜಾಬ್ ಧರಿಸಿ ಬರುವರು ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರಬೇಕೆಂಬ ಅಂಶ ಕೈಬಿಡಲಾಗಿದೆ.
ಅಧಿಕಾರಿಗಳು ಹೇಳುವ ಪ್ರಕಾರ, ಹಿಂದಿನಂತೆ ಪರೀಕ್ಷೆಗೆ ಹಿಜಾಬ್ ಧರಿಸಿ ಬರಲು ಅವಕಾಶವಿದೆ. ಆದರೆ, ಒಂದು ಗಂಟೆ ಮೊದಲೇ ಬರುವ ಅಗತ್ಯವಿಲ್ಲ. ತಪಾಸಣೆಗೆ ಒಂದು ಗಂಟೆ ಬೇಕಿಲ್ಲ. ಹಾಗಾಗಿ ಇತರೆ ವಿದ್ಯಾರ್ಥಿಗಳಂತೆ ನಿಗದಿತ ಸಮಯಕ್ಕೆ ಬಂದು ತಪಾಸಣೆಗೆ ಒಳಗಾದರೆ ಸಾಕು ಎಂದು ಹೇಳಲಾಗಿದೆ.
ಮೊದಲ ಹಂತದ ಪರೀಕ್ಷೆ ವೇಳೆ ಹಿಜಾಬ್ ಧರಿಸಿ ಬರುವುದಾದರೆ ಅಂತಹ ಅಭ್ಯರ್ಥಿಗಳು ತಪಾಸಣೆ ದೃಷ್ಟಿಯಿಂದ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು ಎಂದು ಸೂಚಿಸಿತ್ತು. ಇದು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈಗ ಕೈಬಿಟ್ಟಿದೆ. ಉಳಿದಂತೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ತುಂಬುದೋಳಿನ ವಸ್ತ್ರ ತೊಡುವಂತಿಲ್ಲ, ಯಾವುದೇ ಆಭರಣ, ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ ಎಂಬುದು ಸೇರಿದಂತೆ ಇತರೆ ಎಲ್ಲಾ ಅಂಶಗಳನ್ನು ಮಾರ್ಗಸೂಚಿಯಲ್ಲಿ ಕೆಇಎ ಪ್ರಕಟಿಸಿದೆ.