ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಗೆ 14 ಸಾವಿರ ಮನೆಗಳು ಮಂಜೂರಾಗಿದ್ದು, ಅದರಲ್ಲಿ ಮೊಳಕಾಲ್ಮೂರು ತಾಲ್ಲೂಕಿಗೆ 2797 ಮನೆಗಳಿಗೆ ಕಾರ್ಯದೇಶ ಪತ್ರವನ್ನು ವಿತರಣೆ ಮಾಡಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಗ್ರಾಮದ ಸಮೀಪದ ಶ್ರೀ ಶರಣ ಪರಮೇಶ್ವರಪ್ಪ ತಾತನ ಮಠದ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಆಯೋಜಿಸಿದ್ದ ಮೊಳಕಾಲ್ಮೂರು ತಾಲ್ಲೂಕಿನ ಅಲೆಮಾರಿ ಜನಾಂಗದ ಫಲಾನುಭವಿಗಳಿಗೆ ದೇವರಾಜು ಅರಸು ವಸತಿ ಯೋಜನೆಯಡಿ ಕಾರ್ಯದೇಶ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರಾಜು ಅರಸು ವಸತಿ ಯೋಜನೆಯಡಿ ಅಲೆಮಾರಿ ಜನಾಂಗದವರಿಗೆ ರಾಜ್ಯ ಸರ್ಕಾರ 46 ಸಾವಿರ ಮನೆಗಳ ಮಂಜೂರು ಮಾಡಿದೆ. ಅದರಲ್ಲಿ ಜಿಲ್ಲೆಗೆ 14913 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ದೇವರಾಜ ಅರಸು ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಒಂದೂವರೆ ಲಕ್ಷವನ್ನು ನೀಡಲಾಗುತ್ತಿದ್ದು ಆದರೆ ಆ ಹಣ ಮನೆ ನಿರ್ಮಾಣಕ್ಕೆ ಸಾಕಾಆಗುವುದಿಲ್ಲ ಹಾಗಾಗೀ ಮನೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 3 ಲಕ್ಷ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಯಿ ಅವರಿಗೆ ಮನವಿ ಮಾಡಲಾಗುವುದು ಎಂದರು.
ಜನರು ಮತ್ತು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಬಸ್ಗಳಿಗಾಗಿ ಸಾಕಷ್ಟು ದೂರ ನಡೆಯುವಂತಹ ಪರಿಸ್ಥಿತಿ ಇದೆ. ಹಾಗಾಗಿ ಮೊಳಕಾಲ್ಮೂರು ತಾಲ್ಲೂಕಿನ ಪ್ರತಿ ಹಳ್ಳಿ ಹಳ್ಳಿಗೆ ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಹಳ್ಳಿಗಳಿಗೂ ಕೂಡ ಬಸ್ ಸಂಚಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಮೊಳಕಾಲ್ಮುರು ತಾಲ್ಲೂಕಿನ 78 ಕೆರೆಗಳಿಗೆ ನೀರು ತುಂಬಿಸಲು ರೂ.618ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ನನ್ನ ಅಧಿಕಾರದ ಅವಧಿಯಲ್ಲಿಯೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯಲಿದೆ. ಇದರ ಜೊತೆಗೆ ತುಂಗಾಭದ್ರಾ ಹಿನ್ನೀರಿನ ಎಲ್ಲ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದೆ ಎಂದು ತಿಳಿಸಿದರು.
ಮೊಳಕಾಲ್ಮೂರು ತಾ.ಪಂ. ಇಒ ಜಾನಕಿರಾಮ್ ಮಾತನಾಡಿ, ಮೊಳಕಾಲ್ಮೂರು ತಾಲ್ಲೂಕಿನ 96 ಗ್ರಾಮಗಳನ್ನು ಹೊಂದಿದ್ದು, ತಾಲ್ಲೂಕಿನ ಎಲ್ಲಾ ಗ್ರಾಮಗಳು ಕೃಷಿ ಆಧಾರಿತ ಜೀವನ ನಡೆಸುತ್ತಿದ್ದಾರೆ. ಹಿಂದುಳಿದ ಪ್ರದೇಶವಾಗಿರುವುದರಿಂದ ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಅವಲಂಬಿಸಿದ್ದಾರೆ ಎಂದರು.
ಕಡುಬಡವರು ಮತ್ತು ಹಿಂದುಳಿದ ವರ್ಗಗಳು ನೂರಾರು ವರ್ಷಗಳಿಂದ ಸರ್ಕಾರಿ ವಸತಿ ಸೌಲಭ್ಯ ಹೊಂದಲು ಕರ್ನಾಟಕ ಸರ್ಕಾರ 2013-14 ರಲ್ಲಿ ವಿಶೇಷ ವರ್ಗದ ವಸತಿ ಯೋಜನೆಯನ್ನು ರೂಪಿಸಿ ನಿರ್ವಹಣೆ ಮಾಡಲಾಗಿತ್ತು. ಅದರೆ ನಿಗಧಿತ ಗುರಿ ಸಾಧಿಸುವಲ್ಲಿ ಹಾಗೂ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಪಡೆಯದೇ ಇರುವುದನ್ನು ಗುರುತಿಸಿ 2018-19ನೇ ಸಾಲಿನಲ್ಲಿ ಮರುಸಭೆಯನ್ನು ನಡೆಸಲು ಆದೇಶ ಹೊರಡಿಸಿ ಅದರಂತೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 13 ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ಮಾಡಲಾಗಿದೆ ಎಂದು ಹೇಳಿದರು.
12 ಗ್ರಾ.ಪಂ.ಗಳಲ್ಲಿ ಅಲೆಮಾರಿ ಜನಾಂಗ ಇರುವುದು ಕಂಡುಬಂದಿದ್ದು, ಅದರಲ್ಲಿ 992 ಫಲಾನುಭವಿಗಳನ್ನು ಗುರುತಿಸಲಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಗುರುತಿಸಿರುವ ಫಲಾನುಭವಿಗಳ ಮನೆ ಮನೆಗೆ ತೆರಳಿ ದಾಖಲಾತಿ ಪಡೆಯಲಾಗಿದೆ. 353 ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಇರುವ ಗ್ರಾ.ಪಂ.ಗೆ ವರ್ಗಾಹಿಸಿ ಇಡೀ ತಾಲ್ಲೂಕಿನಲ್ಲಿ ಅಲೆಮಾರಿ ಜನಾಂಗ ವಸತಿ ರಹಿತರ ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಗ್ರಾ.ಪಂ. ಅಧ್ಯಕ್ಷ ಕೃಷ್ಣಪ್ಪ, ಪ.ಪಂ. ಅಧ್ಯಕ್ಷ ಹಾಗೂ ಜಿಲ್ಲಾ ಯಾದವ ಸಂಘದ ಮುಖಂಡರಾದ ಲಕ್ಷ್ಮಣ್, ಶ್ರೀರಾಂಪರ ಗ್ರಾ.ಪಂ. ಅಧ್ಯಕ್ಷ ಪರಮೇಶ್, ಮೊಳಕಾಲ್ಮೂರು ತಹಶೀಲ್ದಾರ್ ಸುರೇಶ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.