ಬಿಜೆಪಿಯವರು ಮಾಡಿದ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷದವರ ತಲೆಗೆ ಕಟ್ಟಲು ಪ್ರಯತ್ನಿಸಲಾಗುತ್ತಿದೆ ಎಂದು ಪಿಸುಗುಟ್ಟಿದ್ದನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಿನ್ನೆ ವರದಿಯಾದ ವಿವಾದ ಕುರಿತು ಇಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ನಿನ್ನೆ ಪತ್ರಿಕಾಗೋಷ್ಠಿ ಆರಂಭಿಸುವ ಮುನ್ನ ಮಾಧ್ಯಮ ವಿಭಾಗದ ಸಂಚಾಲಕರಾಗಿದ್ದ ಸಲೀಂ ನನ್ನ ಬಳಿ ಬಂದು ಒಂದಿಷ್ಟು ಗುನುಗಿದರು.
ಬಿಜೆಪಿಯವರು ಮಾಡಿದ್ದನ್ನು ನಮ್ಮ ಪಕ್ಷದವರ ತಲೆಗೆ ಕಟ್ಟುವ ಪ್ರಯತ್ನ ನಡೆದಿದೆ ಎಂದು ಬೇರೆಯವರು ಮಾತನಾಡಿಕೊಳ್ಳುತ್ತಿದ್ದನ್ನು ಸಲೀಂ ನನ್ನ ಬಳಿ ಹೇಳಿದ್ದರು. ಅದನ್ನು ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತಿವೆ ಎಂದು ಆಕ್ಷೇಪಿಸಿದರು.
ಡಿ.ಕೆ.ಶಿವಕುಮಾರ್ ಕಮಿಷನ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಮಾತನಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಅಧ್ಯಕ್ಷರಾಗಲಿ ಅಥವಾ ಕಾಂಗ್ರೆಸ್ನ ಯಾರು ಕಮಿಷನ್ ಪ್ರವೃತ್ತಿ ಬೆಳೆಸಿದವರಲ್ಲ. ಡಿ.ಕೆ.ಶಿವಕುಮಾರ್ ಅವರು ರಾಜಕೀಯದಿಂದ ಆಸ್ತಿ ಗಳಿಸಿದವರಲ್ಲ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೊಂದಿಗೆ ಮೂರ್ನಾಲ್ಕು ದಶಕಗಳಿಂದ ನನಗೆ ಒಡೆನಾಟವಿದೆ, ಅವರು ಬದ್ಧತೆಯ ರಾಜಕಾರಣಿ, ರೈತ ಕುಟುಂಬದಲ್ಲಿ ಹುಟ್ಟಿ ರಾಜಕೀಯವಾಗಿ ಬೆಳೆದು ಇಂದು ರಾಜ್ಯದಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಇದಕ್ಕೆ ಅವರ ಕ್ರೀಯಾಶೀಲತೆ ಮತ್ತು ಜನಪರ ಕಾಳಜಿ ಕಾರಣ. ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ಪಾವಗಡದಲ್ಲಿ ಸ್ಥಾಪಿಸಿದ ಸೌರ ವಿದ್ಯುತ್ ಉತ್ಪಾದನಾ ಘಟಕವೇ ಅವರ ಜನಪರ ಆಡಳಿತಕ್ಕೆ ಉದಾಹರಣೆ. ನಮ್ಮ ಮಾತುಗಳನ್ನು ತಪ್ಪಾಗಿ ಬಿಂಬಿಸಿ ಅಪ್ರಚಾರ ನಡೆಸುತ್ತಿರುವುದು ಮಾಧ್ಯಮಗಳ ನೈತಿಕತೆ ವಿರುದ್ಧವಾದದ್ದು ಎಂದರು.
ಮಾಧ್ಯಮಗಳು ಯಾವ ಹೇಳಿಕೆಯನ್ನು ತಿರುಚಿಲ್ಲ ಎಂದು ಖಚಿತ ಪಡಿಸಿದಾಗ, ಸ್ಪಷ್ಟನೆ ನೀಡಿದ ಉಗ್ರಪ್ಪ ಅವರು ನಾನು ತಿರುಚಿಲ್ಲ, ಮಾಧ್ಯಮಗಳು ತಿರುಚಬಾರದು. ನಾವು ಪ್ರತಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯನ್ನು ಪರಿಗಣಿಸಬೇಕು. ಅದನ್ನು ಬಿಟ್ಟು ಗುಸುಗುಟ್ಟಿದ್ದನ್ನು ಪರಿಗಣಿಸಬಾರದು ಎಂದರು.
ಅನೇಕರು ಬಿಂಬಿಸಿದ ಹಾಗೇ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಒಂದಾಗಿ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರು ಒಮ್ಮಸ್ಸಿನಿಂದ, ಒಗ್ಗಟ್ಟಿನಿಂದ ಕಾಂಗ್ರೆಸ್ ಮತ್ತೆ ಅಕಾರಿಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ವಿರುದ್ಧವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದರು.