ಬೆಳಗಾವಿ : ಬೆಂಗಳೂರು ನಗರದ ಶ್ರೀ ವಶಿಷ್ಠ ಸೌಹಾರ್ದ ಸಹಕಾರ ಸಂಘದಲ್ಲಿ ಠೇವಣಿದಾರರ ಹಣವನ್ನು ಅವ್ಯವಹಾರದ ಮೂಲಕ ವಂಚಿಸಿರುವ ಪ್ರಕರಣದ ತನಿಖೆಯನ್ನು 2022ರ ಏಪ್ರೀಲ್ನಲ್ಲಿ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಇಂದು (ಡಿ.20) ಸದಸ್ಯ ಯು.ಬಿ.ವೆಂಕಟೇಶ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು ಈ ಸಹಕಾರಿ ಪ್ರಕರಣವು ಪ್ರಸ್ತುತ ಸಿಐಡಿ ವಿಚಾರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸಚಿವರು ನೀಡಿದ ಲಿಖಿತ ಉತ್ತರವು ತಮಗೆ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರಾದ ಯು.ಬಿ.ವೆಂಕಟೇಶ ಅವರು, ಸದರಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಈಗಾಗಲೇ ಹಲವಾರು ಭಾರಿ ಸಭೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗಿದೆ. ವಂಚನೆ ಎಸಗಿರುವ ಹಿನ್ನೆಲೆಯಲ್ಲಿ ಸಹಕಾರಿ ಎಲ್ಲ ನಿರ್ದೇಶಕರನ್ನು ಈಗಾಗಲೇ ಆಡಳಿತ ಮಂಡಳಿಯಿAದ ವಜಾಗೊಳಿಸಲಾಗಿದೆ. ಆರೋಪಿಗಳ ಸ್ಥಿರಾಸ್ತಿಯ ಮಾಹಿತಿ ಸಂಗ್ರಹಿಸಿ, ಜಪ್ತು ಮಾಡಿ ಹರಾಜು ಹಾಕಿ ಕ್ರಮ ಜರುಗಿಸಲಾಗುತ್ತದೆ. 2000 ಠೇವಣಿದಾರರಿಗೆ ಠೇವಣಿ ಹಣ ಹಿಂದಿರುಗಿಸಲು ಸರ್ಕಾರದಿಂದ ಸಕ್ಷಮ ಪ್ರಾಧಿಕಾರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.
16,20,440 ರೈತರಿಗೆ ಸಾಲ: 2020-21ನೇ ಸಾಲಿನಿಂದ ಇಲ್ಲಿಯವರೆಗೆ ರಾಜ್ಯದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳ ತನ್ನ ಶಾಖೆಗಳ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಹಾಗೂ ವಾಣಿಜ್ಯ ಬ್ಯಾಂಕುಗಳಿಗೆ ಅಧ್ಯರ್ಪಿತಗೊಂಡ ಪ್ಯಾಕ್ಗಳ ಮೂಲಕ ರೂ.3 ಲಕ್ಷ ರೂ.ಗಳವರೆಗಿನ ಶೂನ್ಯ ಬಡ್ಡಿ ದರದಲ್ಲಿ 16,20,440 ರೈತರಿಗೆ 11,706.05 ಕೋಟಿ ರೂ.ಗಳಷ್ಟು ಸಾಲ ವಿತರಿಸಲಾಗಿದೆ ಎಂದು ಸದಸ್ಯರಾದ ಹೇಮಲತಾ ನಾಯಕ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.