ಬೆಳಗಾವಿ: ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರೂ.9.81 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆಯಾಗಿದ್ದು, ಎಲ್ಲ ಸೆಕ್ಟರ್ಗಳಲ್ಲೂ ಉದ್ಯೋಗ ಸೃಷ್ಟಿಗೆ ಒತ್ತು ಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ.ಮುರುಗೇಶ ನಿರಾಣಿ ಅವರು ತಿಳಿಸಿದರು.
ವಿಧಾನ ಪರಿಷತ್ತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಇಂದು (ಡಿ.20) ಸದಸ್ಯರಾದ ಡಾ.ಕೆ.ಗೋವಿಂದರಾಜ್, ಎಂ.ನಾಗರಾಜ, ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿ, ಇನ್ವೆಸ್ಟ್ ಕರ್ನಾಟಕ -2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಆಯೋಜನೆಗೆ 74 ಕೋಟಿ ರೂ. ವೆಚ್ಚವಾಗಿದೆ.
ಸಮಾವೇಶದಲ್ಲಿ 57 ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ. ಈ ಯೋಜನೆಗಳು ಬೃಹತ್ ಕೈಗಾರಿಕೆಗಳಾಗಿರುವುದರಿಂದ ಕೈಗಾರಿಕೆಗಳ ಸ್ಥಾಪನೆಗೆ 3-4 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ನಂತರ ಉದ್ಯೋಗ ಸೃಜನೆಯಾಗುತ್ತದೆ ಎಂದು ತಿಳಿಸಿದರು.
31,768 ಅಭ್ಯರ್ಥಿಗಳು ಭಾಗಿ: ಸ್ವಂತ ಉದ್ಯಮ ಸ್ಥಾಪನೆಗೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ‘ಉದ್ಯಮಿಯಾಗು ಉದ್ಯೋಗ ನೀಡು’ವ ಯೋಜನೆಯಡಿ ರಾಜ್ಯದ 6 ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಇದರಡಿ 31,768 ಅಭ್ಯರ್ಥಿಗಳು ಭಾಗಿಯಾಗಿ ಉದ್ಯಮಗಳನ್ನು ಪ್ರಾರಂಭಿಸಲು ಪ್ರೇರಣೆಯನ್ನು ಹೊಂದಿರುತ್ತಾರೆ. ಆಹಾರ, ಟೆಕ್ಸಟೈಲ್, ಎಂಜಿನಿಯರಿAಗ್ ಮತ್ತು ಐಟಿಬಿಟಿ ಇತ್ಯಾದಿ ವಿಷಯಗಳಲ್ಲಿ ಪರಿಣಿತರಿಂದ ಮಾಹಿತಿ ಒದಗಿಸಲಾಗಿದೆ. ಉದ್ಯಮಿಯಾಗಲು ಬಯಸುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಮೂಲಕ ಘಟಕ ಪ್ರಾರಂಭಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ಸಚಿವರಾದ ನಿರಾಣಿ ಅವರು, ಸದಸ್ಯ ಡಿ.ಎಸ್.ಅರುಣ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.