ಬೆಂಗಳೂರು: ಪ್ರವೀಣ್ ನೆಟ್ಟಾರು ಅವನ್ನು ಕೊಲೆ ಮಾಡಿದವರು ಕೇರಳದವರಲ್ಲ. ಆದರೆ ಕೇರಳದೊಂದಿಗೆ ನಂಟು ಹೊಂದಿರುವ ಒಂದು ಸಮುದಾಯಕ್ಕೆ ಸೇರಿದ ಸ್ಥಳೀಯ ಯುವಕರೇ ನಡೆಸಿರುವ ಕೃತ್ಯವಿದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಮೂಲ ಕಾರಣ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ. ಜತೆಗೆ ಕೆಲವು ದಿನಗಳ ಹಿಂದೆ ನಡೆದಿದ್ದ ಮಸೂದ್ ಕೊಲೆಗೆ ಪ್ರತೀಕಾರವಾಗಿಯೂ ಈ ಹತ್ಯೆ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳ ಮಾಹಿತಿಯಿಂದ ಬೆಳಕಿಗೆ ಬಂದಿದೆ. ಕೇರಳ ನೋಂದಣಿಯ ಬೈಕನ್ನು ಬಳಸುವ ಮೂಲಕ ಹಂತಕರು ಕೇರಳದವರು ಎನ್ನುವಂತೆ ಬಿಂಬಿಸಿ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸಿದ ಸಾಧ್ಯತೆ ಇದೆ. ಕೃತ್ಯದ ಬಳಿಕ ಆರೋಪಿಗಳು ಕೇರಳಕ್ಕೆ ತೆರಳಿರುವುದು ದೃಢಪಟ್ಟಿದೆ.
ಪ್ರಮುಖ ಆರೋಪಿಗಳ ಪೈಕಿ ಓರ್ವ ಸುಳ್ಯದವ ಇನ್ನೋರ್ವ ಬೆಳ್ಳಾರೆ ಮೂಲದವ ಎಂಬ ಮಾಹಿತಿ ಇದೆ. ಹಂತಕರು ತಮ್ಮ ಮೊಬೈಲ್ ಫೋನ್ಗಳನ್ನು ಮನೆಯಲ್ಲೇ ಬಿಟ್ಟು ಮನೆಗೆ ಬೀಗ ಹಾಕಿ ಊರೂರು ಅಲೆಯುತ್ತಿರುವುದು ತಿಳಿದಿದೆ. ಎರಡು ಮೂರು ದಿನಗಳಲ್ಲಿ ಆರೋಪಿಗಳ ಬಂಧನವಾಗಲಿದೆ ಎನ್ನುವ ಸುಳಿವನ್ನು ಸಚಿವರು ನೀಡಿದ್ದಾರೆ.