ಬೆಂಗಳೂರು: ಉತ್ತರ ಕರ್ನಾಟಕ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಕರಾವಳಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಪ್ರದೇಶವನ್ನು ಕೇಸರಿ ಪಕ್ಷದ ಹಿಂದುತ್ವದ ಪ್ರಯೋಗಾಲಯ ಎಂದು ಪರಿಗಣಿಸಲಾಗಿದೆ.
ಬಿಜೆಪಿಯ ಆಂತರಿಕ ಸಮೀಕ್ಷೆಯು ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಮಾತಿದೆ. ಈ ಸೂಚನೆಗಳು ಪಕ್ಷದ ನಾಯಕರಲ್ಲಿ ಆತಂಕ ಮೂಡಿಸಿದ್ದು, ಅಮಿತ್ ಶಾ ಅವರ ಭೇಟಿಯಿಂದ ಈ ಪ್ರದೇಶದಲ್ಲಿ ಪಕ್ಷದ ಪರ ಅಲೆ ಸೃಷ್ಟಿಸಲು ಬಿಜೆಪಿ ಬಯಸಿದೆ. ರಾಜ್ಯದ 224 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 90 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯೂ ಸೂಚಿಸಿರುವುದು ಆಡಳಿತಾರೂಢ ಬಿಜೆಪಿ ಆತಂಕಕ್ಕೆ ಕಾರಣವಾಗಿದೆ ಎಂದು ಮೂಲಗಳು ವಿವರಿಸಿವೆ.
ಪಕ್ಷವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಬಯಸಿದೆ. 2018ರ ಚುನಾವಣೆಯಲ್ಲಿ ಎರಡು ಜಿಲ್ಲೆಗಳಲ್ಲಿ ಪಕ್ಷ 12 ಸ್ಥಾನಗಳನ್ನು ಗೆದ್ದಿತ್ತು.
ಸುಳ್ಯ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಬಿಜೆಪಿ ತೀವ್ರ ಪೈಪೋಟಿ ಎದುರಿಸಲಿದೆ ಎಂದು ಮೂಲಗಳು ವಿವರಿಸುತ್ತವೆ. ಈ ಕ್ಷೇತ್ರಗಳು ಇತ್ತೀಚಿನ ದಿನಗಳಲ್ಲಿ ಕೋಮುಗಲಭೆ ಮತ್ತು ಸೇಡಿನ ಹತ್ಯೆಗಳಿಗೆ ಸಾಕ್ಷಿಯಾಗಿದ್ದವು.
ಸುಳ್ಯ ಕ್ಷೇತ್ರದಿಂದ ಆರು ಬಾರಿ ಗೆಲುವು ದಾಖಲಿಸಿರುವ ಎಸ್.ಅಂಗಾರ ಅವರನ್ನು ಬದಲಾಯಿಸಲು ಪಕ್ಷ ಮುಂದಾಗಿದೆ ಎಂದು ಮೂಲಗಳು ವಿವರಿಸಿವೆ. ಪುತ್ತೂರು, ಮಂಗಳೂರು ನಗರ ಉತ್ತರ, ದಕ್ಷಿಣ ಕನ್ನಡದ ಬಂಟ್ವಾಳ ಮತ್ತು ಉಡುಪಿ ಜಿಲ್ಲೆಯ ಬೈಂದೂರು, ಕಾಪು ಕ್ಷೇತ್ರಗಳಲ್ಲಿಯೂ ಪಕ್ಷ ತೀವ್ರ ಪೈಪೋಟಿ ಎದುರಿಸುತ್ತಿದೆ.
ಮುತಾಲಿಕ್ ಸ್ಪರ್ಧೆ ತಂದ ಆತಂಕ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಪಕ್ಷವನ್ನು ಸೋಲಿಸುವುದಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಿಸಿದ್ದರು. ಈ ಕ್ರಮದಿಂದ ಕರಾವಳಿ ಭಾಗದಲ್ಲಿ ಕೇಸರಿ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಹಿಂದೂ ಮಹಾಸಭಾ ಕೂಡ ಬಿಜೆಪಿಯ ಸೋಲು ಖಚಿತ ಎಂದು ಘೋಷಿಸಿದೆ. ಆದಾಗ್ಯೂ, ಕೇಸರಿ ಪಕ್ಷವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬೂತ್ ಮಟ್ಟದಿಂದ ಸಂಘಟನೆಯನ್ನು ಬಲಪಡಿಸುವತ್ತ ಗಮನಹರಿಸುತ್ತಿದೆ.