ಬೆಂಗಳೂರು: ಜನಸಾಮಾನ್ಯರಲ್ಲಿ ಕಾನೂನಿನ ಜ್ಞಾನ ಮತ್ತು ಅರಿವು ಬಹಳ ಮುಖ್ಯವಾದದ್ದು, ನಾವು ಇದುವರೆಗೂ ಕೇಂದ್ರದಿಂದ ಹಾಗೂ ರಾಜ್ಯದಿಂದ ರೂಪಿಸಲಾಗಿರುವ ಕಾನೂನಿನ ಪುಸ್ತಕಗಳು ಆಂಗ್ಲ ಭಾಷೆಯಲ್ಲಿದ್ದು, ಅದನ್ನು ಪಾಲಿಸಿಕೊಂಡು ಬಂದಿದ್ದೇವೆ. ಇಂದು ಈ ಪುಸ್ತಕಗಳನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಲಾಗಿದ್ದು, ಕಾನೂನು ಮತ್ತು ಅಧಿನಿಯಮಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹ ಕೆಲಸವನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಭಾಷಾ (ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯವು ಮಾಡಿರುವುದು ತುಂಬಾ ಶ್ಲಾಘನೀಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಭಾಷಾ (ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದ ವತಿಯಿಂದ ಹೊರತರಲಾದ ಭಾರತ ದಂಡ ಸಂಹಿತೆ (IPC), ದಂಡ ಪ್ರಕ್ರಿಯಾ ಸಂಹಿತೆ (CCP), ಮತ್ತು ಭಾರತ ಸಾಕ್ಷ್ಯ ಅಧಿನಿಯಮ (IEA) ಗಳ ದ್ವಿಭಾಷಾ (Diglot) ಕನ್ನಡ ಅವೃತ್ತಿಗಳ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಆಂಗ್ಲ ಭಾಷೆಯಲ್ಲಿರುವ ಈ ಪುಸ್ತಕಗಳನ್ನು ಭಾಷಾಂತರ ಮಾಡಲು ಸಂಸದೀಯ ಇಲಾಖೆ ಸುದೀರ್ಘವಾಗಿ ಶ್ರಮವಹಿಸಿದೆ. ಇದರ ಫಲವಾಗಿ ಇಂದು ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ, ಮತ್ತು ಭಾರತ ಸಾಕ್ಷ್ಯ ಅಧಿನಿಯಮ ಪುಸ್ತಕಗಳು ಕನ್ನಡ ಭಾಷೆಗೆ ಭಾಷಾಂತರಗೊಂಡಿದ್ದು, ಜನಸಾಮಾನ್ಯರು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವವರು ಬಹಳ ಸುಲಭವಾಗಿ ಓದಿ ಅರ್ಥಮಾಡಿಕೊಳ್ಳುವಂತಹ ಪುಸ್ತಕಗಳಾಗಿವೆ. ಈ ಪುಸ್ತಕಗಳನ್ನು ಎಲ್ಲಾ ತಾಲ್ಲೂಕು ಕಚೇರಿಗಳು, ಪೊಲೀಸ್ ಠಾಣೆಗಳಿಗೆ ಒದಗಿಸುವ ಕೆಲಸ ಕೂಡಲೇ ಆಗಬೇಕು. ಅಲ್ಲದೇ ಇಲಾಖಾ ವೆಬ್ಸೈಟ್ನಲ್ಲಿ ಸಹ ಪ್ರಕಟಿಸಲು ಕ್ರಮವಹಿಸಬೇಕು. ಸಾರ್ವಜನಿಕರಿಗೂ ಸಹ ಕಡಿಮೆ ಬೆಲೆಯಲ್ಲಿ ಈ ಪುಸ್ತಕಗಳು ದೊರಕುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ವಿ.ಸುನಿಲ್ ಕುಮಾರ್, ಡಾ.ಕೆ.ಸಿ.ನಾರಾಯಣಗೌಡ, ಶಾಸನ ರಚನೆ ಹಾಗೂ ಸಂಸದೀಯ ವ್ಯವಹಾರಗಳ ಸರ್ಕಾರದ ಕಾರ್ಯದರ್ಶಿಗಳಾದ ಜಿ.ಶ್ರೀಧರ್, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾದ ಎಂ.ವೆಂಕಟೇಶ ಉಪಸ್ಥಿತರಿದ್ದರು.