ಬೆಂಗಳೂರು: ಕರ್ನಾಟಕ ಏಕೀಕರಣ ಸಮಾರಂಭಕ್ಕೆ ೬೦ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಏಕೀಕರಣ ಜ್ಯೋತಿ ಮೆರವಣಿಗೆ ನಡೆಸಲಾಯಿತು.
ಬೆಳ್ಳಿ ರಥದಲ್ಲಿ ಭುವನೇಶ್ವರಿ ಆಳೆತ್ತರದ ಚಿತ್ರಪಟವನ್ನು ಇಟ್ಟು ಮೆರವಣಿಗೆ ಮಾಡುವ ಮೂಲಕ ೬೦ ವರ್ಷಗಳ ಹಿಂದೆ ನಡೆದ ಏಕೀಕರಣ ಸಮಾರಂಭವನ್ನು ಸ್ಮರಿಸಲಾಯಿತು. ಈ ವೇಳೆ ವಾಟಾಳ್ ನಾಗರಾಜ್ ಏಕೀಕರಣದ ನೆನಪಿಗಾಗಿ ೬೦ ಈಡುಗಾಯಿಗಳನ್ನು ಒಡೆಯುವ ಮೂಲಕ ಏಕೀಕರಣ ಜ್ಯೋತಿಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಇನ್ನೂ ೧೫ ದಿನಗಳ ಒಳಗಾಗಿ ಮೈದಾನಕ್ಕೆ ಕರ್ನಾಟಕ ಏಕೀಕರಣದ ಆಟದ ಮೈದಾನವೆಂದು ತಾವೇ ನಾಮಕರಣ ಮಾಡುವುದಾಗಿ ಘೋಷಿಸಿದರು.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮೈದಾನದ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮೈದಾನವನ್ನು ಅಭಿವೃದ್ಧಿಪಡಿಸಿ ಏಕೀಕರಣದ ಘಟನೆಗಳನ್ನು ಜನತೆಗೆ ತಿಳಿಸುವ ಸಲುವಾಗಿ ಪ್ರವಾಸಿ ತಾಣವಾಗಿಸಬೇಕೆಂದು ಆಗ್ರಹಿಸಿದರು.